ಶಹಾಪುರ : ರಾಯಚೂರು ವಿಶ್ವವಿದ್ಯಾಲಯವು ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ನಗರದ ಸರಕಾರಿ ಪದವಿ ಕಾಲೇಜ ವಿದ್ಯಾರ್ಥಿಗಳು ಆವರಣದಲ್ಲಿ ದಿಡೀರ್ ಪ್ರತಿಭಟನೆ ನಡೆಸಿ ರಾಯಚೂರು ವಿಶ್ವವಿದ್ಯಾಲಯ ಹಾಗೂ ಕಾಲೇಜ ಪ್ರಾಂಶುಪಾಲರ ವಿರುದ್ಧ ಘೋಷಣೆ ಕೂಗಿದರು.
ಈ ಕಾಲೇಜಿನಲ್ಲಿ 1800ಕ್ಕೂ ಹೆಚ್ಚಿನ ವಿದ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿದ್ದಾರೆ.ಈ ಪ್ರತಿಭಟನೆ ಬೆಳೆ ಮಾತನಾಡಿದ ವಿದ್ಯಾರ್ಥಿ ಮುಖಂಡ ಶರಣು ಗೊಂದನವರ್ ಅವರು, ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಧೀರ ಹಿಂದುಳಿದ ಪ್ರದೇಶವಾಗಿದೆ. ಈ ಭಾಗದಲ್ಲಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಆದರೆ ಆ ಸೌಲಭ್ಯಗಳು ತಲುಪಿಸುವಲ್ಲಿ ವಿಫಲವಾಗಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವವರೇ ಸರ್ಕಾರಿ ಕಾಲೇಜು ಗಳಿಗೆಬರುತ್ತಾರೆ.
ಇಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಎಸ್ಸಿ ಎಸ್ಟಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಬಡ ಮಕ್ಕಳೇ ಹೆಚ್ಚಾಗಿದ್ದಾರೆ. ವಿದ್ಯಾರ್ಥಿಗಳ ತಂದೆ ತಾಯಿಗಳು ಕೂಲಿ ಕೆಲಸ ಮಾಡಿ ಮಕ್ಕಳನ್ನು ಓದಿಸುತ್ತಿದ್ದಾರೆ. ಆದರೆ ಈ ಕಾಲೇಜಿನಲ್ಲಿ ಕಲಿಕೆಗೆ ಪೂರಕವಾದ ವಾತಾವರಣವಿಲ್ಲ. ವಿದ್ಯಾರ್ಥಿಗಳ ಕಲಿಕೆ ಬಗ್ಗೆ ಪ್ರಾಂಶುಪಾಲರು ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಏನಾದರೂ ಕೇಳಿದರೆ ಹಾರೈಕೆ ಉತ್ತರ ನೀಡುತ್ತಾರೆ.
ನಗರ ಪ್ರದೇಶ ಗ್ರಾಮೀಣ ಪ್ರದೇಶದಲ್ಲಿ ಇರುವ ಪದವಿ ಕಾಲೇಜಿನಲ್ಲಿ ಕಾಲೇಜ್ ಡೆವಲಪ್ಮೆಂಟ್ ಕಮಿಟಿ ಇದ್ದೇ ಇರುತ್ತದೆ. ಕಾಲೇಜ್ ಡೆವಲಪ್ಮೆಂಟ್ ಗೆ ರೂ.100 ತೆಗೆದುಕೊಳ್ಳಲಿ, ಆದರೆ ಅದು ಬಿಟ್ಟು 500 ತೆಗೆದುಕೊಳ್ಳುವುದು ಯಾವ ನ್ಯಾಯ.? ಇನ್ನೊಂದು ವಿಚಿತ್ರವೆಂದರೆ ಕಾಲೇಜು ವಾರ್ಷಿಕ ಸಂಚಿಕೆ ತರಲು ಪ್ರತಿಯೊಬ್ಬ ವಿದ್ಯಾರ್ಥಿಯಿಂದ 100 ರೂಪಾಯಿ ಪಡೆಯುತ್ತಾರೆ. ಆದರೆ ಒಬ್ಬೇ ಒಬ್ಬ ವಿದ್ಯಾರ್ಥಿಗಳಿಗೆ ವಾರ್ಷಿಕ ಸಂಚಿಕೆ ಪುಸ್ತಕ ನೀಡುವುದಿಲ್ಲ. ಕೇಳಿದರೆ ನಿಮಗ್ಯಾಕೆ ಬೇಕು ಇನ್ನು ಪ್ರಿಂಟ್ ಆಗಿಲ್ಲ ಎಂದು ಹೇಳುತ್ತಾರೆ.
ಹಾಗಾದರೆ ವಾರ್ಷಿಕ ಸಂಚಿಕೆಗೆ ರೂ.100 ಏಕೆ ತೆಗೆದುಕೊಂಡರು ಎಂದು ಕಾಲೇಜು ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ರಾಯಚೂರು ವಿಶ್ವವಿದ್ಯಾಲಯಕ್ಕೆ ಒಳಪಡುವ ಬೇರೆ ತಾಲೂಕ ಕೇಂದ್ರದಲ್ಲಿರುವ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ 2710 ರೂಪಾಯಿ ಇದೆ. ಆದರೆ ನಾವು ವ್ಯಾಸಂಗ ಮಾಡುತ್ತಿರುವ ಈ ಕಾಲೇಜಿನಲ್ಲಿ 3590 ರೂಪಾಯಿ ಪ್ರವೇಶ ಶುಲ್ಕ ಪಡೆದಿದ್ದಾರೆ. ಕೇಳಿದರೆ ಸಂಬಂಧಪಟ್ಟ ಸೆಕ್ಷನ್ ಕ್ಲರ್ಕ್ ಹಾಗೂ ಪ್ರಮುಖರು ಸರಿಯಾಗಿ ಸ್ಪಂದಿಸುತ್ತಿಲ್ಲ.
ನಮ್ಮ ಸಮಸ್ಯೆಗಳು ಕೇಳಲು ಹೋದರೆ ಪ್ರಾಂಶುಪಾಲರು ಸಿಗುವುದೇ ಇಲ್ಲ. ಕೇಳಿದರೆ ಇನ್ನಿಲ್ಲದ ನೆಪ ಹೇಳುತ್ತಾರೆ. ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಕ್ಲರ್ಕಗಳನ್ನು ಕೇಳಲು ಹೋದರೆ ನಮಗೇನು ಗೊತ್ತಿಲ್ಲ ನೀವು ಪ್ರಾಂಶುಪಾಲರನ್ನು ಕೇಳಿ ಪ್ರತಿಯೊಂದುಕ್ಕೂ ಇದೇ ಉತ್ತರ ಹೇಳುತ್ತಾರೆ. ಅಲ್ಲದೆ ಲೈಬ್ರರಿಗೆ ವಿದ್ಯಾರ್ಥಿಗಳು ಓದಲು ಹೋದರೆ ಒಳಗೆ ಸೇರಿಸಿಕೊಳ್ಳುವುದಿಲ್ಲ. ಹಾಗಾದರೆ ನಮ್ಮ ವಿದ್ಯಾರ್ಥಿ ಗಳಗೋಳು ಯಾರು ಕೇಳಬೇಕು. ಕೂಡಲೇ ಹೆಚ್ಚುವರಿ ಶುಲ್ಕ ವಾಪಸ್ ಕೊಡಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಡಾ. ಸಂಗಪ್ಪ ಎಸ್ ರಾಂಪುರೆ ಅವರು, ಈ ಕಾಲೇಜಿನಲ್ಲಿ ಏಳು ಜನ ಕೆಲಸಗಾರರನ್ನು ಕಾಲೇಜು ಡೆವಲಪ್ಮೆಂಟ್ ಕಮಿಟಿ ವತಿಯಿಂದ ತೆಗೆದುಕೊಳ್ಳಲಾಗಿದೆ. ಈ ಕಮಿಟಿ (ಸಿಡಿಸಿ)ಗೆ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಅವರ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಪ್ರವೇಶದ ಶುಲ್ಕದ ಜೊತೆ 500ರೂ ಹೆಚ್ಚುವರಿಯಾಗಿ ಹಣ ಪಡೆದುಕೊಂಡು ಆ ಹಣವನ್ನು ಈ ಕೆಲಸಗಾರರಿಗೆ ನೀಡಲಾಗುತ್ತಿದೆ. ಅಲ್ಲದೆ ವಾರ್ಷಿಕ ಸಂಚಿಕೆಗೆ ಒಂದು ಪ್ರತಿಗೆ 300 ತನಕ ಖರ್ಚು ಬರುತ್ತದೆ. ಆದರೆ ನಾವು ಪ್ರತಿಯೊಬ್ಬ ವಿದ್ಯಾರ್ಥಿಯಿಂದ 100 ರೂ ಪಡೆದು ಪ್ರಿಂಟ್ ಮಾಡಿದ ಪ್ರತಿಗಳನ್ನು ಲೈಬ್ರರಿಯಲ್ಲಿ ಇಡಲಾಗುತ್ತಿದೆ. ವಿದ್ಯಾರ್ಥಿಗಳು ಅಲ್ಲೇ ನೋಡಬಹುದು. ಕಾಲೇಜಿಗೆ ಅನುದಾನದ ಕೊರತೆ ಇದೆ, ಖರ್ಚು ಜಾಸ್ತಿ ಇದೆ ಎಂದು ಮಾಹಿತಿ ನೀಡಿದರು.
ಪ್ರತಿಯೊಂದು ಕಾಲೇಜಿನಲ್ಲಿ ಸಿಡಿಸಿ ಶುಲ್ಕ ಇರುತ್ತದೆ. ಇಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಇರುವುದಿಲ್ಲ. 100,200 ತೆಗೆದುಕೊಂಡರೆ ಅದೇ ಜಾಸ್ತಿ. ಆದರೆ 500 ರಿಂದ 600 ರೂ ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ಶಾಸಕರು ಇದರ ಬಗ್ಗೆ ಗಮನಹರಿಸಬೇಕಾಗಿರುವುದು ಅವಶ್ಯವಾಗಿದೆ. ಕಾರಣ ಅತ್ಯಂತ ಕಡುಬಡತನದ ಮಧ್ಯೆ ವ್ಯಾಸಂಗ ಮಾಡಲು ಬರುತ್ತಿರುವ ವಿದ್ಯಾರ್ಥಿಗಳಿಗೆ ಈ ಕಾಲೇಜಿನಲ್ಲಿ ಉಪನ್ಯಾಸಕರ, ಪ್ರಾಂಶುಪಾಲರ ಹೊಂದಾಣಿಕೆ ಕೊರತೆಯಿಂದ ಒಳ್ಳೆ ಶಿಕ್ಷಣ ಸಿಗುತ್ತಿಲ್ಲ. ಈ ವಾತಾವರಣದಿಂದ ಮಕ್ಕಳ ಕಲಿಕೆ ಕುಂಟಿತವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸುವುದು ಅತ್ಯಂತ ಅವಶ್ಯವಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಉಪನ್ಯಾಸಕೋರೊಬ್ಬರು ತಿಳಿಸಿದ್ದಾರೆ.