ಇದೇನ್ರೀ ಇದು ವಸತಿ ಶಾಲೆನಾ?. ಶೌಚಾಲಯಗಳಿಗೆ ಬಾಗಿಲುಗಳೇ ಇಲ್ಲ. ಮಕ್ಕಳಿಗೆ ಮಲಗಲು ಬೆಡ್ ಇಲ್ಲ ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡ ನ್ಯಾ.ರವೀಂದ್ರ ಹೊನ್ನಾಲೆ 

ಶಹಾಪುರ : ಇದೇನ್ರೀ ಇದು ವಸತಿ ಶಾಲೆನಾ?. ಶೌಚಾಲಯಗಳಿಗೆ ಬಾಗಿಲುಗಳೇ ಇಲ್ಲ. ಮಕ್ಕಳಿಗೆ ಮಲಗಲು ಬೆಡ್ ಇಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವೀಂದ್ರ ಹೊನ್ನಾಲೆ ಅವರು ವಸತಿ ಶಾಲೆಯ ಪ್ರಾಚಾರ್ಯರ ವಿರುದ್ಧ ಕಿಡಿಕಾರಿದರು ಕಿಡಕಿ ಗ್ಲಾಸ್ ಮುರಿದು ಹೋಗಿವೆ. ಶಿಕ್ಷಕರು ಸರಿಯಾಗಿ ಬರುತ್ತಿಲ್ಲ. ಅಡಿಗೆಯವರು ಸರಿಯಾಗಿ ಊಟ ಮಾಡುತ್ತಿಲ್ಲ. ಮಕ್ಕಳಿಗೆ ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ. ಮಕ್ಕಳಿಗೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಇಷ್ಟೆಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು ನೀವು ಯಾವ ಪುರುಷಾರ್ಥಕ್ಕಾಗಿ ಶಾಲೆ ನಡೆಸುತ್ತೀರಿ ನಿಮ್ಮ ಕೈಯಲ್ಲಿ ಆಗದಿದ್ದರೆ ಬಿಟ್ಟು ಹೋಗಿ. ಇಲ್ಲಾ ಒಂದು ವಾರದಲ್ಲಿ ಎಲ್ಲಾ ಸಮಸ್ಯೆಗಳು ಸರಿಪಡಿಸಬೇಕು ಎಂದು ಸೂಚಿಸಿದರು.ತಾಲೂಕಿನ ಬೇವಿನಹಳ್ಳಿ ಕ್ರಾಸ್ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಗುರುವಾರ ದಿಡೀರ ಭೇಟಿ ನೀಡಿ ವಸತಿ ಶಾಲೆಯ ಕ್ಲಾಸ್ ರೂಮ್, ವಸತಿಗೃಹ, ಬಾಲಕ ಮತ್ತು ಬಾಲಕಿಯರ ಶೌಚಾಲಯ, ಸ್ನಾನ ಗೃಹ, ಮೂತ್ರಾಲಯ ಹಾಗೂ ಅಡಿಗೆ ಕೋಣೆ, ಉಗ್ರಾಣವನ್ನು ಪರಿಶೀಲಿಸಿದ ನಂತರ ಅಡಿಗೆಯನ್ನು ಸ್ವತಃ ಪರಿಶೀಲಿಸಿ ಊಟ ಮಾಡಿದ ನಂತರ ಮಕ್ಕಳು ಬೆಳಿಗ್ಗೆ ಹೋದ ಅವರು ಮಕ್ಕಳಿಂದ ಸಮಸ್ಯೆಗಳನ್ನು ತಿಳಿದುಕೊಂಡರು.

ಶಾಲೆಯ ದಾಖಲಾತಿ ವಿವರ : ಆರರಿಂದ ಹತ್ತನೇ ತರಗತಿವರೆಗೆ 250 ಮಕ್ಕಳು ಹಾಗೂ ಪದವಿಪೂರ್ವ ಕಾಲೇಜಿನಲ್ಲಿ 160 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.ಶಿಕ್ಷಕರ ವಿವರ : 8 ಜನ ಖಾಯಂ ಶಿಕ್ಷಕರಿದ್ದಾರೆ. 4 ಜನ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪದವಿಪೂರ್ವ ಕಾಲೇಜಿನಲ್ಲಿ ಖಾಯಂ ಉಪನ್ಯಾಸಕರಿಲ್ಲ. ಮೂರು ಜನ ನಿಯೋಜನೆ ಮೇಲೆ ಹಾಗೂ ಐದು ಜನ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಬೋಧನೆ ಸಮಸ್ಯೆ. ಗಣಿತ ಸರಿಗತಿ ಸರಿಯಾಗಿ ನಡೆಯುತ್ತಿಲ್ಲ ಅಲ್ಲದೆ ಲ್ಯಾಬ್ ಸಹ ನಡೆಯುವುದಿಲ್ಲ ಎಂದು ಮಕ್ಕಳು ನ್ಯಾಯಾಧೀಶರ ಗಮನಕ್ಕೆ ತಂದರು.

ವಸತಿ ಶಾಲೆಯ ಸಮಸ್ಯೆ : ಈ ಶಾಲೆಯ ಯಾವ ಮಕ್ಕಳಿಗೂ ಮಲಗಲು ಬೆಡ್ ಗಳಿಲ್ಲ. ಮಂಚದ ಮೇಲೆ ಬೆಡ್ ಶೀಟ್ ನೊಂದಿಗೆ ಮಲಗಬೇಕು. ಅಲ್ಲದೆ ಕಿಟಕಿ ಬಾಗಿಲುಗಳು ಮುರಿದುಹೋಗಿವೆ. ಚಳಿ ಜಾಸ್ತಿ ಇರುವುದರಿಂದ ಮಲಗಲು ಆಗುತ್ತಿಲ್ಲ. ನಮ್ಮಲ್ಲಿ ಸುಮಾರು ಜನರಿಗೆ ಜ್ವರ ನೆಗಡಿ ಕೆಮ್ಮು ಕಾಣಿಸಿಕೊಂಡಿದೆ. ಕಿಟಕಿ ರಿಪೇರಿ ಮಾಡಲು ಕೇಳಿದರೆ ಯಾರು ಕಿವಿಯಲ್ಲಿ ಹಾಕಿಕೊಳ್ಳುತ್ತಿಲ್ಲ. ಅಲ್ಲದೆ ಶೌಚಾಲಯಗಳಿಗೆ ಬಾಗಿಲುಗಳೆ ಇಲ್ಲ. ಅಲ್ಲದೆ ಇವುಗಳಿಗೆ ಲೈಟ್ ಇಲ್ಲ. ಕತ್ತಲಲ್ಲಿ ಶೌಚಾಲಯಕ್ಕೆ ಹೋಗಲು ಭಯವಾಗುತ್ತಿದೆ. ಸ್ವಚ್ಛತೆ ಮರಿಚಿಕೆಯಾಗಿದೆ. ಶೌಚಾಲಯಕ್ಕೆ ಹೋಗಲು ಮುಜುಗರವಾಗುತ್ತಿದೆ ಎಂದು ಬಾಲಕ ಬಾಲಕಿಯರು ದಿನನಿತ್ಯ ಅನುಭವಿಸುಟ್ಟಿರುವ ತೊಂದರೆ ಬಗ್ಗೆ ನ್ಯಾಯಾಧೀಶರ ಗಮನಕ್ಕೆ ತಂದರು.

ಚಾರ್ಟ್ ಪ್ರಕಾರ ಊಟ ಸಿಗುತ್ತಿಲ್ಲ : ದಿನ ನಿತ್ಯ ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ. ಅಲ್ಲದೆ ಸರಿಯಾದ ಸಮಯಕ್ಕೆ ಊಟ ಸಿಗುವುದಿಲ್ಲ. ಅಲ್ಲದೆ ಹೊಟ್ಟೆ ತುಂಬಾ ಊಟ ಕೊಡುವುದಿಲ್ಲ. ನಮಗೆ ಬೇಕಾದಷ್ಟು ಊಟ ಕೇಳಿದರೆ ಕೊಡದೆ ಬಯ್ಯುತ್ತಾರೆ. ಇಲ್ಲಸಲ್ಲದ ಆರೋಪ ಮಾಡಿ ಹೊರ ಹಾಕುವುದಾಗಿ ಅಂಜಿಸುತ್ತಾರೆ. ರಾತ್ರಿ ಉಳಿದ ಅನ್ನವನ್ನು ಕೊಟ್ಟು ಮುಂಜಾನೆ ತಿನ್ನಲು ಕೊಡುತ್ತಾರೆ, ವಿಧಿ ಇಲ್ಲದೆ ತಿನ್ನಬೇಕಾದ ದುಸ್ಥಿತಿ ಇದೆ. ದಯಮಾಡಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಿರಿ ಎಂದು ಮಕ್ಕಳು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡ ಪ್ರಸಂಗ ನಡೆಯಿತು.
ಅಡಿಗೆಯವರ ಸಮಸ್ಯೆ ದಿನಾಲು ಅಡುಗೆಯವರು ಬೆಳಿಗ್ಗೆ ಬರುವುದಿಲ್ಲ 10.30 ರಿಂದ 11 ಗಂಟೆಗೆ ಬರುತ್ತಾರೆ. ಬಂದ ಮೇಲೂ ನಾವು ಹೇಳಿದ ಅಡಿಗೆ ಮಾಡುವುದಿಲ್ಲ. ಕೇಳಿದರೆ ಮನೆಯವರಿಂದ ಇಲ್ಲವೆ ಸಂಘಟನೆಗಳಿಂದ ಹೆದರಿಸುತ್ತಾರೆ ನಾವೇನು ಮಾಡಬೇಕು ಅಸಾಯಕರಾಗಿದ್ದೇವೆ.

ಒಬ್ಬರ ಕೆಲಸ ಇನ್ನೊಬ್ಬರು ಹಾಜರ್ : ಅಲ್ಲದೆ ಶಿಲ್ಪಾ ಎನ್ನುವ ಮಹಿಳೆ ಇಲ್ಲಿ ಖಾಯಂ ಕೆಲಸ ಮಾಡುತ್ತಾರೆ. ಆದರೆ ಅವರು ಸುಮಾರು ತಿಂಗಳಿಂದ ಅವರು ಕೆಲಸಕ್ಕೆ ಬರುವುದಿಲ್ಲ. ಅವರ ಬದಲಿಗೆ ಅನಿತಾ ಎನ್ನುವ ಮಹಿಳೆ ಕೆಲಸಕ್ಕೆ ಬರುತ್ತಾಳೆ. ಅನಿತಾಳಗೆ ತಿಂಗಳಿಗೆ 8 ಸಾವಿರ ಹಣ ಶಿಲ್ಪಾ ಕೊಡುತ್ತಾರೆ. ಪ್ರತಿ ತಿಂಗಳೂ ನಾವು ಶಿಲ್ಪಾ ಅವರಿಗೆ ಸಂಬಳ ಮಾಡುತ್ತಿರುವುದಾಗಿ ವಸತಿ ಶಾಲೆಯ ಮುಖ್ಯಸ್ಥರು ನ್ಯಾಯಾಧೀಶರ ಗಮನಕ್ಕೆ ತರುತ್ತಿದ್ದಂತೆ ಕೆಂಡಮಂಡಲರಾದ ನ್ಯಾಯಾಧೀಶರು ಏನಾದರೂ ಆದರೆ ಅದಕ್ಕೆ ಜವಾಬ್ದಾರಿ ಯಾರು. ನಾಳೆಯಿಂದ ಅವರೇ ಕೆಲಸಕ್ಕೆ ಬರಲಿ ಇಲ್ಲದಿದ್ದರೆ ಬೇರೆಯವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಡಿ ಎಂದು ಖಡಕ್ ಸೂಚನೆ ನೀಡಿದರು.

ಇದೆ ವೇಳೆ ಜಿಲ್ಲಾ ಪ್ಯಾನಲ್ ಅಡ್ವಕೇಟ್ ಕೃಷ್ಣವೇಣಿ ಬಿ. ವಸತಿ ಶಾಲೆಯ ಪ್ರಾಚಾರ್ಯ ಸಿದ್ದು ಪೂಜಾರಿ, ವಾರ್ಡನ್ ರಾವುತಪ್ಪ, ತಾಲೂಕ ಸಮಾಜ ಕಲ್ಯಾಣ ಅಧಿಕಾರಿ ರಾವುತಪ್ಪ ಹವಾಲ್ದಾರ ಇದ್ದರು.

ಈ ವಸತಿ ಶಾಲೆಯ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದು, ಸಮಸ್ಯೆಗಳನ್ನು ಒಂದು ವಾರದಲ್ಲಿ ಬಗೆಹರಿಸುವಂತೆ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿದ್ದು. ಅಡಿಗೆಯವರು ಸರಿಯಾದ ಸಮಯಕ್ಕೆ ಬರದಿದ್ದರೆ ಅವರನ್ನು ಒಳಗಡೆ ಸೇರಿಸಿಕೊಳ್ಳಬಾರದೆಂದು ಸೂಚನೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಮಕ್ಕಳಿಗೆ ತೊಂದರೆ ಆದರೆ ಸಹಿಸುವುದಿಲ್ಲ.

ನ್ಯಾ.ರವೀಂದ್ರ ಹೊನಾಲೆ. ಸದಸ್ಯ ಕಾರ್ಯದರ್ಶಿ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಾದಗಿರಿ

ಸಮಸ್ಯೆಗಳನ್ನು ಎರಡು ಮೂರು ದಿನದಲ್ಲಿ ಸರಿಪಡಿಸುತ್ತೇನೆ. ನನಗೆ ಕಾಲಾವಕಾಶ ನೀಡಿ. ಇನ್ನು ಮುಂದೆ ಯಾವುದೇ ಲೋಪವಾಗದಂತೆ ಎಚ್ಚರ ವಹಿಸುತ್ತೇನೆ. ಚಾರ್ಟ್ ಪ್ರಕಾರ ಮಕ್ಕಳಿಗೆ ಊಟ ನೀಡುತ್ತೇನೆ.

ಸಿದ್ದು ಪೂಜಾರಿ ಪ್ರಾಚಾರ್ಯರು.
ಮುರಾರ್ಜಿ ದೇಸಾಯಿ ವಸತಿ ಶಾಲೆ ಬೇವಿನಹಳ್ಳಿ ಕ್ರಾಸ್

About The Author