ಸಗರ ಗ್ರಾಮದಲ್ಲಿ ರೈತರ ಸಾಂಸ್ಕೃತಿಕ ವೈಭವ | ದಸರಾದಿಂದ ದೀಪಾವಳಿವರೆಗೆ ತಿಂಗಳ ಪೂರ್ತಿ ಆಚರಿಸುವ ಹಬ್ಬ | ರೈತರಿಂದ ವಿವಿಧ ಬಗೆಯ ಜಾನಪದ ಕಲೆ ಪ್ರದರ್ಶನ

ಕರುನಾಡು ವಾಣಿ ವಾರ್ತೆ
ಗ್ರಾಮೀಣ ಸೊಗಡು
ತಿಂಗಳ ಬೆಳಕಿನ ಅಂಗಳದಲ್ಲಿ..
ದಸರಾದಿಂದ ದೀಪಾವಳಿವರೆಗೆ ಸಾಂಸ್ಕೃತಿಕ ಹಬ್ಬ | ರೈತರಿಂದ ವಿವಿಧ ಬಗೆಯ ನೃತ್ಯ ಪ್ರದರ್ಶನ
*****
ಶಹಪುರ : ನಗರಗಳು ಬೆಳೆಯುತ್ತಿದ್ದಂತೆ ಗ್ರಾಮೀಣ ಸೊಗಡು ಮಾಯವಾಗುತ್ತಿರುವ ಈ ಕಾಲದಲ್ಲಿ ಜನಪದ ಹಾಡು, ಕೋಲಾಟ ಸೇರಿದಂತೆ ಇತರ ಗ್ರಾಮೀಣ ನೃತ್ಯಗಳು ವರ್ಣರಂಜಿತ ಮತ್ತು ಲಯ ಬದ್ಧವಾಗಿ ರೈತಾಪಿಜನ ಕಾಲಾನುಕ್ರಮವಾಗಿ ತಿಂಗಳ ಪೂರ್ತಿ ಆಚರಿಸುವ ರೈತರ ಸಾಂಸ್ಕೃತಿಕ ಹಬ್ಬ ಇಂದಿಗೂ ಜೀವಂತವಾಗಿದೆ.

ತಾಲೂಕಿನ ಸಗರ ಗ್ರಾಮದಲ್ಲಿ ಪ್ರಸ್ತುತ ಈ ಸಂದರ್ಭದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆ ಕಾರ್ಯಕ್ಕೆ ಅಲ್ಪವಿರಾಮವಿಟ್ಟು ಪ್ರತಿವರ್ಷ ದಸರಾ ಹಬ್ಬದದಿಂದ ಆರಂಭಗೊಳ್ಳುವ ರೈತರ ಕುಣಿತ,ಹಾಡು ತಿಂಗಳವರೆಗೆ ಅಂದರೆ ದೀಪಾವಳಿ ಹಬ್ಬದವರೆಗೂ ನಡೆಯುತ್ತದೆ. ಪ್ರತಿ ರಾತ್ರಿ ಇಲ್ಲಿನ ಆರು ಕಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನದ ಅಂಗಳದಲ್ಲಿ ಆಧ್ಯಾತ್ಮಿಕ, ಮನೋರಂಜನೆ ಮತ್ತು ಜನಪದ ಹಾಡು ಶ್ರೀರಂಗನ ಅಮೋಘ ಕಥಾನಕ ಅದ್ಭುತವಾಗಿ ಜರುಗುತ್ತವೆ.

ಅಂತಿಮವಾಗಿ ದೀಪಾವಳಿ ಹಬ್ಬದಂದು ಗ್ರಾಮದ ಒಕ್ಕಲಿಗೇರ ಮಠದಲ್ಲಿ ಸಂಭ್ರಮದಿಂದ ಈ ಕಾರ್ಯಕ್ರಮವನ್ನು ಮುಕ್ತಾಯಗೊಳಿಸುವ ಪರಿಪಾಠ ಬೆಳೆದು ಬಂದಿದೆ.

ಇದನ್ನು ಇಂದಿಗೂ ಹಿರಿಯ ರೈತರು ಮುಂದುವರೆಸಿಕೊಂಡು ಬರುತ್ತಿದ್ದಾರೆ. ದಿನವಿಡಿ ದುಡಿಯುವ ರೈತನಿಗೆ ಈ ಕಾರ್ಯಕ್ರಮದಿಂದ ಮನೋಉಲ್ಲಾಸಗೊಂಡು ಮತ್ತೇ ತನ್ನ ಕಾಯಕದಲ್ಲಿ ತೊಡಗಿಸಿಕೊಳ್ಳಲು ಅಗಾಧವಾದ ಮಾನಸಿಕ ಶಕ್ತಿ ದೊರಕುತ್ತದೆ ಎನ್ನುತ್ತಾರೆ ಇಲ್ಲಿನ ರೈತರು.

ಕಾಲಿಗೆ ಗೆಜ್ಜೆ ಕೈಯಲ್ಲಿ ಕೋಲು ಹಿಡಿದು ಹಿರಿಯರು ಸೇರಿದಂತೆ ಯುವಕರು ಕೋಲಾಟದಲ್ಲಿ ಪಾಲ್ಗೊಳ್ಳುತ್ತಾರೆ. ಯಾವುದೇ ಜಾತಿ ಭೇದವಿಲ್ಲದೆ ಎಲ್ಲಾ ಸಮುದಾಯದವರು ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ರಾಗ, ಲಯಬದ್ಧ ಹಾಡು, ತಾಳ, ವಾದ್ಯಕ್ಕೆ ತಕ್ಕಂತೆ ಕುಣಿತ ನೋಡುವುದೇ ಒಂದು ಭಾಗ್ಯ. ಎಲ್ಲಾ ರೈತರು ಒಂದೇ ಮನೆಯಂತೆ ಭಾಗವಹಿಸಿ ಸಂತಸ ಪಡುತ್ತಾರೆ. ಅಲ್ಲದೆ ವಿಶೇಷವಾಗಿ ಇಲ್ಲಿ ರೈತರು ಕೃಷ್ಣಲೀಲೆ, ಶ್ರೀರಂಗ, ಹಾಲು,ಮೊಸರು, ಬೆಣ್ಣೆ, ತುಪ್ಪ ಸೇರಿದಂತೆ ರೈತರ ಬೆಳೆಗಳ ಮೇಲೆ ಹಲವು ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.

ಇಲ್ಲಿ ವಿವಿಧ ಕುಣಿತಗಳು ಪ್ರದರ್ಶನಗೊಳ್ಳುತ್ತವೆ. ಅವುಗಳಲ್ಲಿ ಚಿತ್ರ ಕೋಲಾಟ, ಬಾಗಿ ಕುಣಿಯುವ ಕೋಲಾಟ ಸೇರಿದಂತೆ ಇತರೆ ಕುಣಿತಗಳ ಜೊತೆಗೆ ರಸಭರಿತ ಹಾಡುಗಳು ಪ್ರದರ್ಶಿಸುವ ಮೂಲಕ ನೆರೆದ ಜನರ ಮನಸೂರೆಗೊಳಿಸುತ್ತಿದೆ.

ವರ್ಷಪೂರ್ತಿ ದುಡಿಯುವ ರೈತಾಪಿ ಜನರು ಮನೋರಂಜನೆ ಮತ್ತು ಅವರ ಕಲೆ ಪ್ರದರ್ಶನ ಗೊಳಿಸುವ ಮೂಲಕ ತಮ್ಮ ಈ ತಿಂಗಳಲ್ಲಿ ರೈತರು ಮೈ ಮನಸ್ಸು ತಣಿಸಿಕೊಳ್ಳುತ್ತಾರೆ. ರಾತ್ರಿ ಹತ್ತು ಗಂಟೆಗೆ ಊಟದ ನಂತರ ಒಂದೆಡೆ ಸೇರುವ ರೈತರು ಸಾಮೂಹಿಕವಾಗಿ ಕುಣಿತ ಹಾಡು ಆರಂಭಿಸುವ ಮೂಲಕ ಇಷ್ಟ ದೇವನನ್ನು ನೆನೆಯುತ್ತಾರೆ.ರೈತರ ಕುಣಿತ ಗತ್ತಿನಿಂದ ಕೂಡಿರುತ್ತದೆ.

ಬಸ್ಸಪ್ಪ ಜಾಯಿ, ಸಾಯ್ಬಣ್ಣ ಮರ್ಸ ಶರಣಪ್ಪ ನಂದಿಕೋಲ,ಗುರುಲಿಂಗಪ್ಪ ಜಾತಿ, ಮಲ್ಲಪ್ಪ ನಂದಿ ಕೋಲ, ಮಲ್ಲಪ್ಪ ಮರ್ಸಾ, ಬಸವಂತರಾಯ ಜಾಯಿ, ದೇವಪ್ಪ ಜಾಯಿ, ನಾಗಣ್ಣ ಜಾತಿ ಸೇರಿದಂತೆ ಇತರರು ಸಾಂಸ್ಕೃತಿಕ ಹಬ್ಬವನ್ನು ಮುಂದುವರಿಸಿಕೊಂಡು ಹೊರಟಿದ್ದಾರೆ.

ಆಧುನಿಕತೆಯ ಪ್ರಭಾವದಿಂದ ನಮ್ಮ ಶ್ರೀಮಂತಿಕೆಯ ಜನಪದ ಕಲಾ ಪ್ರಕಾರಗಳು ನಶಿಸುತ್ತಿವೆ. ಅವರಲ್ಲಿ ಹುದುಗಿರುವ ಜನಪದ ಕಲೆಯನ್ನು ಪೋಷಿಸಿ ಬೆಳೆಸುವ ಕಾರ್ಯ ನಡೆಯಬೇಕಾಗಿದೆ.

 

ದುರ್ಗಪ್ಪ ನಾಯಕ್
ಗಡಿ ಭದ್ರತಾ ಯೋಧ ಹಾಗೂ ಜಾನಪದ ಹಾಡುಗಾರ ಸಗರ.

 

ಸಗರನಾಡಿನ ಸಗರ ಗ್ರಾಮ ತನ್ನದೇ ಆದ ಇತಿಹಾಸ ಪರಂಪರೆಯನ್ನು ಹೊಂದಿದೆ. ಸುಮಾರು ವರ್ಷಗಳಿಂದಲೂ ಸಂಸ್ಕೃತಿಕ ಕಲೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿದೆ. ಪ್ರತಿ ವರ್ಷ ದಸರಾ ಹಬ್ಬದಿಂದ ಪ್ರಾರಂಭವಾಗುವ ಸಂಸ್ಕೃತಿಕ ಕಾರ್ಯಕ್ರಮ ತಿಂಗಳ ಪೂರ್ತಿ ನಡೆದು ದೀಪಾವಳಿ ಹಬ್ಬದಂದು ಗ್ರಾಮದ ಒಕ್ಕಲಿಗರ ಮಠದಲ್ಲಿ ರೈತರ ಕೋಲಾಟದೊಂದಿಗೆ ಮುಕ್ತಾಯವಾಗುತ್ತದೆ.

ಮರುಳ ಮಹಾಂತ ಶಿವಾಚಾರ್ಯರು.
ಒಕ್ಕಲಿಗರ ಮಠ ಸಗರ

 

About The Author