ಶಹಾಪುರ : ದೇಶದಲ್ಲಿ ಪ್ರಕೃತಿ ವಿಕೋಪ ಆದ ಸಂದರ್ಭದಲ್ಲಿ ಸ್ಥಳೀಯ ನಿವೃತ್ತ ದೈಹಿಕ ಶಿಕ್ಷಕರಾದ ಸೋಮಶೇಖರಯ್ಯ ಹಿರೇಮಠ ತಮ್ಮ ತಿಂಗಳ ಪಿಂಚಣಿಯ ವೇತನವನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಜಮಾ ಮಾಡುತ್ತಾ ಬಂದಿದ್ದಾರೆ.ಸುಮಾರು ವರ್ಷಗಳಿಂದಲೂ ಕೂಡ ತಮ್ಮ ಪಿಂಚಣಿ ಹಣವನ್ನು ಇದೇ ರೀತಿಯಾಗಿ ಸಂತ್ರಸ್ತರಿಗೆ ಜಮಾ ಮಾಡುತ್ತಾರೆ. ಪ್ರಸ್ತುತ ಕೇರಳ ರಾಜ್ಯದ ವಯನಾಡು ಪ್ರದೇಶದಲ್ಲಿ ಪ್ರಕೃಕ ವಿಕೋಪದ ಪರಿಣಾಮವಾಗಿ 280ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಈ ವಿಕೋಪದಿಂದ ನಿರಾಶ್ರಿತರಾದ ತಮ್ಮ ತಿಂಗಳ ಪಿಂಚಣಿ ಹಣವನ್ನು 37,421 ರೂ. ಹಣವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಇಂದು ಡಿಡಿ ಮೂಲಕ ಜಮಾ ಮಾಡಿದ್ದು ಸಂಕಷ್ಟಕ್ಕೀಡಾದ ಜನರೆಲ್ಲರೂ ಕೂಡಲೇ ಪುನರ್ಜೀವನ ಕಟ್ಟಿಕೊಳ್ಳುವಂತೆ ಭಗವಂತನು ಸಹಕರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅವರು,ಮನುಷ್ಯರು ತೊಂದರೆಯಲ್ಲಿದ್ದಾಗ ಪರಸ್ಪರ ಸಹಾಯ ಮಾಡುವುದು ಧರ್ಮ. ಯಾವುದೇ ಜಾತಿ, ಧರ್ಮ, ಮತ, ಪಂಥಗಳಿಗಿಂತ ಮಾನವ ಧರ್ಮ ಅತಿ ಮುಖ್ಯವಾದದ್ದು. ಕಷ್ಟಕಾಲದಲ್ಲಿ ನಾವು ನೆರವಾಗುವುದರಿಂದ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.