ಶಹಾಪುರಃ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ಸೋಮವಾರ ಭಾರಿ ಮಳೆಯಾಗಿದ್ದು, ಭತ್ತ, ಹತ್ತಿ, ತೊಗರಿ ಬೆಳೆಗಳ ಫಲ ಸಂಪೂರ್ಣ ನಾಶವಾಗಿದೆ.ಇದರಿಂದ ರೈತರ ಸ್ಥಿತಿ ಚಿಂತಾಜನಕವಾಗಿದ್ದು,ತಲೆ ಮೇಲೆ ಕೈಹೊತ್ತುಕೊಳ್ಳುವಂತೆ ಮಾಡಿದೆ.ಗುಡುಗು ಮಿಂಚು ಸಮೇತ ಸುರಿದ ಭಾರಿ ಮಳೆಯಿಂದಾಗಿ ಸಗರ ಭಾಗದ ಶಾರದಹಳ್ಳಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಜಮೀನಿನಲ್ಲಿರುವ ಬೆಳೆಗಳು ನೆಲಕಚ್ಚಿವೆ. ಜೋರಾಗಿ ಸುರಿದ ಮಳೆಯಿಂದಾಗಿ ಬೆಳೆಗಳು ಹಾಳಾಗಿದ್ದು ಫಲ ಹಾಳಾಗಿದೆ. ರೈತರ ಮೊಗದಲ್ಲಿ ಆತಂಕ ಸಂತಸ ಇಲ್ಲದೆ ಸಂಕಷ್ಟ ಎದುರಾಗಿದೆ.
ಈ ವರ್ಷದಲ್ಲಿ ಮಳೆ ಬಾರದೆ ಬೆಳೆಗಳೆಲ್ಲ ಬಾಡಿ ಹೋಗುತ್ತಿದ್ದು, ಮಳೆಗಾಗಿ ಪರಿತಪಿಸುತ್ತಿದ್ದ ರೈತರಿಗೆ ಕಳೆದ ಎರಡು ಮೂರು ದಿನಗಳಿಂದ ಕೃಷ್ಣಾ ಕಾಡಾ ವ್ಯಾಪ್ತಿಯ ಕಾಲುವೆಗೆ ನೀರು ಬಿಟ್ಟಿರುವದರಿಂದ ಜಮೀನಿಗೆ ನೀರು ಬಿಡುವಲ್ಲಿ ಹಗಲು ರಾತ್ರಿ ನಿರತರಾಗಿದ್ದ ರೈತರಿಗೆ ಶಾರದಹಳ್ಳಿ ಭಾಗದಲ್ಲಿ ದಿಡೀರನೆ ಮಳೆ ಸುರಿದ ಪರಿಣಾಮ ರೈತರು ಮತ್ತೆ ಸಂಕಷ್ಟಕ್ಕೆ ಈಡಾದ ಸ್ಥಿತಿ ನಿರ್ಮಾಣವಾಗಿದೆ.