ನಾವು ಸ್ಥಾಪಿಸಿದ ” ಶೂದ್ರ ಭಾರತ ಪಕ್ಷ” ಎನ್ನುವ ಪ್ರಾದೇಶಿಕ ಪಕ್ಷದ ನೊಂದಣಿಗಾಗಿ ನವದೆಹಲಿಯ ಕೇಂದ್ರ ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಿದ್ದೆವು.ಇಂದು ಚುನಾವಣಾ ಆಯೋಗದಿಂದ ಸ್ವೀಕೃತಿಪತ್ರವು ಬಂದಿದ್ದು ಆ ಪತ್ರದಲ್ಲಿ ” ನಮ್ಮ ಅರ್ಜಿಯು ಕೇಂದ್ರ ಚುನಾವಣಾ ಆಯೋಗದಲ್ಲಿ ಸ್ವೀಕೃತಗೊಂಡಿದ್ದು,ಪರಿಶೀಲನೆ ಮಾಡಲಾಗುತ್ತಿದ್ದು ಅವಶ್ಯಕತೆ ಎನ್ನಿಸಿದರೆ ಹೆಚ್ಚಿನ ವಿವರಗಳಿಗಾಗಿ ಕೇಳಲಾಗುವುದು” ಎಂದು ತಿಳಿಸಲಾಗಿದೆ.ನಾವು ಪಕ್ಷದ ನೊಂದಣಿ ಅರ್ಜಿಯನ್ನು ಚುನಾವಣಾ ಆಯೋಗವು ನಿಗದಿ ಪಡಿಸಿದ ನಮೂನೆಯಲ್ಲಿ,ಎಲ್ಲ ನಿಬಂಧನೆಗಳನ್ನು ಪೂರೈಸಿ ಕಳಿಸಿದ್ದರಿಂದ ಚುನಾವಣಾ ಆಯೋಗವು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ.ದಸರಾದ ಹೊತ್ತಿಗೆ ” ಶೂದ್ರ ಭಾರತ ಪಕ್ಷ” ದ ನೊಂದಣಿ ಪ್ರಕ್ರಿಯೆ ಪೂರ್ಣಗೊಳ್ಳಬಹುದು.ನವೆಂಬರ್ ತಿಂಗಳಲ್ಲಿ ನಾವು ಪಕ್ಷದ ಸಂಘಟನೆಪ್ರಾರಂಭಿಸಲಿದ್ದೇವೆ.
ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಬಲ ಪ್ರಾದೇಶಿಕ ರಾಜಕೀಯ ಪಕ್ಷ ಒಂದರ ಅಗತ್ಯವಿದೆ ಎಂದು ನಾನು ಪ್ರತಿಪಾದಿಸುತ್ತಿದ್ದೆ.ಬದಲಾದ ಪರಿಸ್ಥಿತಿಯಲ್ಲಿ ನಾನೇ ಪ್ರಾದೇಶಿಕ ಪಕ್ಷ ಒಂದನ್ನು ಕಟ್ಟುವಂತೆ ಆದದ್ದು ವಿಶ್ವೇಶ್ವರ ಶಿವನಪ್ರೇರಣೆಯೇ! ತಳಸಮುದಾಯಗಳ ರಾಜಕೀಯ ಆಕಾಂಕ್ಷೆಯ ಪ್ರತೀಕವಾಗಿ ಹುಟ್ಟಿಕೊಂಡ ” ಶೂದ್ರ ಭಾರತ ಪಕ್ಷ” ವು ಪರಶಿವನಪ್ರೇರಣೆಯಂತೆ ಕಾಲಮಾನದ ಅವಶ್ಯಕತೆಯಾಗಿ ಮೂಡಿ ಬಂದಿದೆ.ನಮ್ಮ ಪಕ್ಷವು ಹುಟ್ಟುವ ಹೊತ್ತಿಗೆ ಕರ್ನಾಟಕದ ಪ್ರಾದೇಶಿಕ ರಾಜಕೀಯ ಪಕ್ಷ ಎಂದು ಹೆಸರಾಗಿದ್ದ ಜಾತ್ಯಾತೀತ ಜನತಾ ದಳವು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದು ಮುಂದೆ ಶೂದ್ರ ಭಾರತ ಪಕ್ಷವು ಕರ್ನಾಟಕದ ಪ್ರಾತಿನಿಧಿಕ ಪ್ರಾದೇಶಿಕ ಪಕ್ಷವಾಗಿ ಬೆಳೆಯಲಿದೆ ಎನ್ನುವುದರ ಮುನ್ಸೂಚನೆ.