ಮಲ್ಲಿಕಾರ್ಜುನ ಖರ್ಗೆಯವರ ಮೈಬಣ್ಣದ ಕುರಿತು ಮಾತನಾಡಿದ ಆರಗ ಜ್ಞಾನೇಂದ್ರದ ಹೇಳಿಕೆ ಖಂಡನೀಯ : ಡಾ. ಕೃಷ್ಣಮೂರ್ತಿ

 

ಡಾ.ಕೃಷ್ಣಮೂರ್ತಿ 
ಕೆಪಿಸಿಸಿ ಯಾದಗಿರಿ ಜಿಲ್ಲಾ ವೈದ್ಯಕೀಯ ಘಟಕದ ಅಧ್ಯಕ್ಷರು

ಶಹಾಪುರ : ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಒಬ್ಬ ಮುತ್ಸದ್ದಿ ರಾಜಕಾರಣಿ. ದೇಶಕ್ಕೆ ಅವರ ಕೊಡುಗೆ ಅತ್ಯಮೂಲ್ಯವಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಅತಿ ಹೆಚ್ಚು ಶ್ರಮಿಸಿದ ಶೋಷಿತರ ಸಮುದಾಯಕ್ಕಾಗಿ ದುಡಿಯುತ್ತಿರುವ ಐವತ್ತು ವರ್ಷಕ್ಕಿಂತಲೂ ಹೆಚ್ಚಾಗಿ ರಾಜಕಾರಣದಲ್ಲಿದ್ದು, ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣಿ ಮಾಡಿದ ಖರ್ಗೆಯವರ ಮೈಬಣ್ಣದ ಕುರಿತು ಬಿಜೆಪಿಯ ಶಾಸಕರಾದ ಆರಗ ಜ್ಞಾನೇಂದ್ರ ರವರು ಮಾತನಾಡಿರುವುದು ಖಂಡನೀಯ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಯಾದಗಿರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಡಾ. ಕೃಷ್ಣಮೂರ್ತಿ ಖಂಡಿಸಿದ್ದಾರೆ.

ಖರ್ಗೆಯವರ ಬಗ್ಗೆ ನಿಮಗೇನು ಗೊತ್ತು. ಯಾವತ್ತೂ ಶೋಷಿತರ ಪರ ಚಿಂತಿಸುವ ನಿಷ್ಕಲ್ಮಶ ಮನಸ್ಸುಳ್ಳ ವ್ಯಕ್ತಿ ಮಲ್ಲಿಕಾರ್ಜುನ್ ಖರ್ಗೆಯವರು. ಅಂತಹ ವ್ಯಕ್ತಿಯ ಬಗ್ಗೆ ಈ ರೀತಿ ಮಾತನಾಡಿರುವುದು ನಿಮ್ಮ ಮಾನಸಿಕ ಮತ್ತು ಬೌದ್ಧಿಕ ದಿವಾಳಿತನ ಎದ್ದು ಕಾಣುತ್ತದೆ. ಒಬ್ಬ ಮುತ್ಸದ್ದಿ ರಾಜಕಾರಣಿಯ ಬಗ್ಗೆ ನಿಮ್ಮ ಹೇಳಿಕೆ ಅತ್ಯಂತ ಖಂಡನೀಯ. ಬಿಜೆಪಿ ಪಕ್ಷ ಕೂಡಲೇ ಇವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

About The Author