ಶಾಲಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ವರ್ತೂರು ಯುವ ಘರ್ಜನೆಯಿಂದ ಸಚಿವರಿಗೆ ಮನವಿ

ವಡಗೇರಾ : ತಾಲೂಕಿನ ಐಕೂರು ಗ್ರಾಮದ ಸ.ಹಿ.ಪ್ರಾ ಶಾಲೆ ಪ್ರೌಢಶಾಲೆಗೆ ಮೇಲ್ದರ್ಜೆಯಾಗಿದ್ದು ಶಾಲಾ ಕಟ್ಟಡಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ 50.00 ಲಕ್ಷ ರೂ‌.ಮಂಜೂರಾಗಿದ್ದು, ಕೆಲಸ ನಿಲ್ಲಿಸಲಾಗಿದೆ, ಕೂಡಲೇ ಪ್ರಾರಂಭ ಮಾಡಿ, ಕಾಮಗಾರಿ ಪೂರ್ಣಗೊಳಿಸಲು ಆದೇಶಿಸಬೇಕೆಂದು ಯಾದಗಿರಿ ಜಿಲ್ಲಾ ವರ್ತೂರು ಪ್ರಕಾಶ ಯುವ ಘರ್ಜನೆಯ ಜಿಲ್ಲಾಧ್ಯಕ್ಷರಾದ ಐಕೂರು ಅಶೋಕ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಹಾಗೂ ಯಾದಗಿರಿ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ಅವರಿಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು.
ಶಾಲೆಯಲ್ಲಿ  400 ಜನ ಮಕ್ಕಳ ದಾಖಲೆ ಇದ್ದು, ಶಾಲಾ ಮಕ್ಕಳಿಗೆ ಕೊಠಡಿ ಇರುವುದಿಲ್ಲ. ಇರುವ ಕಟ್ಟಡ ಶಿಥಿಲಗೊಂಡಿದ್ದು, ಕುಸಿದು ಬೀಳುವ ಸ್ಥಿತಿಯಲ್ಲಿವೆ. ಮಕ್ಕಳಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಮಕ್ಕಳಿಗೆ ಶೌಚಾಲಯ ನಿರ್ಮಿಸಿ ಬೋರವೆಲ್ ಕೊರೆಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ.
ಸದರಿ ಶಾಲಾ ಕಟ್ಟಡ ಪೂರ್ಣಗೊಳಿಸಲೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು ಖಾಲಿ ಇರುವ ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಾಲಾ ಅಭಿವೃದ್ಧಿಗೆ ಸಹಕರಿಸಬೇಕೆಂದು ತಿಳಿಸಿದರು.

About The Author