ಮುಖ್ಯಮಂತ್ರಿಯಿಂದ ಬೃಹತ್ ರೋಡ್ ಶೋ : ಶಹಪುರ ಅಭಿವೃದ್ಧಿಗಾಗಿ ಅಮ್ಮಿನ ರೆಡ್ಡಿಯನ್ನು ಗೆಲ್ಲಿಸಿ

ಶಹಾಪುರ : ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯಾದ ಅಮಿನ್ ರೆಡ್ಡಿ ಯಾಳಗಿಯವರನ್ನು 25,000 ಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ. ಪಕ್ಕದ ಸುರಪುರದಲ್ಲಿನ ಅಭಿವೃದ್ಧಿಯಾದಂತೆ ಶಹಪುರದಲ್ಲಿಯೂ ಕೂಡ ಅಭಿವೃದ್ಧಿ ಪರ್ವವನ್ನೇ ಹರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ನಡೆದ ರೋಡ್ ಶೋ ದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೇಸರಿ ಅಲೆ ಇದೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.ರಾಹುಲ್ ಗಾಂಧಿ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಯಾರೇ ಬಂದರೂ ಕೇಸರಿ ಅಲೆಯನ್ನು ತಡೆಯಲು ಸಾಧ್ಯವಿಲ್ಲ ಎಂದರು.
70 ವರ್ಷಗಳಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಬರೀ ಸುಳ್ಳನ್ನು ಹೇಳಿಕೊಂಡು ಆಡಳಿತ ನಡೆಸಿದೆ. ಸ್ವಾತಂತ್ರ ನಂತರ ದೇಶವನ್ನು ಒಡೆಯಿತು. ಈಗ ಸಮಾಜವನ್ನು ಒಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
****
ತಾಕತ್ತಿದ್ದರೆ ಮೀಸಲಾತಿಗೆ ಕೈ ಹಾಕಿ ಕಾಂಗ್ರೆಸ್ಸಿಗೆ ಸವಾಲ್ :30 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ.ವೀರಶೈವ ಲಿಂಗಾಯತ ಮತ್ತು ಒಕ್ಕಲಿಗರಿಗೆ ಮೀಸಲಾತಿ ಕೊಟ್ಟಿದ್ದೇವೆ.ಕಾಂಗ್ರೆಸ್ ನವರು ತಾಕತ್ತಿದ್ದರೆ ಮೀಸಲಾತಿಗೆ ಕೈ ಹಾಕಿ ನೋಡಿ ಎಂದು ಕಾಂಗ್ರೆಸ್ ನವರಿಗೆ ಸವಾಲು ಹಾಕಿದರು.
ಶೇಕಡ 75 ರಷ್ಟು ಮೀಸಲಾತಿ ಕೊಡುತ್ತೇವೆ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರು ಇಷ್ಟು ವರ್ಷಗಳ ಕಾಲ ಏಕೆ ಕೊಡಲಿಲ್ಲ. ಆದರೆ ನಾವು 30 ವರ್ಷದ ಬೇಡಿಕೆಯನ್ನು ಈಡೇರಿಸಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ನವರ ಗ್ಯಾರಂಟಿ ಕಾರ್ಡ್ಗಳನ್ನು ನಂಬಬೇಡಿ ಮೇ 10 ರವರೆಗೆ ಮಾತ್ರ ಗ್ಯಾರಂಟಿ ಕಾರ್ಡ್ ಆಮೇಲೆ ಗಳಗಂಟಿ ಕಾರ್ಡ್ಗಳಾಗುತ್ತವೆ ಎಂದು ಲೇವಡಿ ಮಾಡಿದರು.
ಚರಬಸವೇಶ್ವರ ಕಮಾನಿನಿಂದ ಬಸವೇಶ್ವರ ವೃತ್ತದ ವರೆಗೆ ರೋಡ್ ಶೋ ನಡೆಯಿತು. ಸಂಸದರಾದ ಅಮರೇಶ ನಾಯಕ, ಶಾಸಕರಾದ ರಾಜುಗೌಡ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶರಣುಭೂಪಾಲ ರೆಡ್ಡಿ ಹಿರಿಯ ಬಿಜೆಪಿ ಮುಖಂಡರಾದ ಡಾ.ಚಂದ್ರಶೇಖರ ಸುಬೇದಾರ, ತಾಲೂಕು ಮಂಡಲ ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳ, ಜಿಲ್ಲಾ ಪ್ರಕೋಷ್ಟದ ಭೀಮರಾಯ ಜಂಗಳಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author