ಕರೆಕರೆದು ಬೋಧಿಸಿ
ಗುರುಗಳಾದೆವೆಂಬಿರಿ
ನೂರು ಸಾವಿರ ಶಿಷ್ಯರೆನಗೆಂದು
ಜಂಬ ಕೊಚ್ಚುವಿರಿ
ಗುರುಬೋಧೆ ಎಂಬುದು ಸಂತೆಯ ಸರಕೆ
ಕೊಂಡು ಖರೀದಿಸಲು ?
ಉಪದೇಶವೆಂಬುದು ಲೇವಾದೇವಿ ವ್ಯವಹಾರವೆ
ದೇಣಿಗೆ ಕಾಣಿಕೆಗಳ ಕೊಟ್ಟು ಧನ್ಯರಾಗಿರಿ ಎನ್ನಲು ?
ಹಣದಾಸೆಗೆ ಶಿಷ್ಯರ ಮಾಡಿಕೊಂಡವನೆತ್ತಣ ಗುರು ?
ಗುರುವೆಂತಿಹನೆಂದು ವಿಚಾರಿಸದೆ
ಶರಣೆಂದು ಶಿಷ್ಯನಾದ ಮಂದಮತಿ ಎತ್ತಣ ಶಿಷ್ಯ ?
ಪರತತ್ತ್ವವನ್ನರಿಯದವನು ಗುರುವಲ್ಲ
ಗುರುತತ್ತ್ವ ತಿಳಿಯದವನು ಶಿಷ್ಯನಲ್ಲ
ಗುರುಪಾದದಿ ಶರಣೆಂದ ಶಿಷ್ಯನ
ಭವದಬೀಜವ ಸುಟ್ಟುರುಹಬಲ್ಲವನೆ
ನಿಜಗುರುವೆಂದಿತ್ತು
ಕೈಲಾಸನಾಥ ವಿಶ್ವೇಶ್ವರನ ಸತ್ಯವಚನ.