ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆ : ಮನರೇಗಾ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತ ಸಾರ್ವಜನಿಕರ ಆಕ್ರೋಶ

ಬಸವರಾಜ ಕರೇಗಾರ
basavarajkaregar@gmail.com

***

ವಡಗೇರಾ : ಯಾದಗಿರಿ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪದೇ ಪದೇ ವರ್ಗಾವಣೆಯಿಂದ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬರುತ್ತಿದೆ.ಕೊಂಕಲ,ನಾಯ್ಕಲ,ಹೊಸ್ಕೇರ,  ನಾಗನಟಗಿ,ಐಕೂರು,ಹಯ್ಯಳ ಬಿ, ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಪದೇ ಪದೇ ವರ್ಗಾವಣೆ ಮಾಡಲಾಗುತ್ತಿದೆ.

ಸ್ಥಳೀಯ ಗ್ರಾಮ ಪಂಚಾಯಿತಿಯ ಸದಸ್ಯರ ಒತ್ತಡ, ಜನಸಾಮಾನ್ಯರ ಜನ ಪ್ರತಿನಿಧಿಗಳ ದೂರು,ರಾಜಕೀಯ ನಾಯಕರ ಶಿಫಾರಸ್ಸು ನೀಡುವುದು,ಸರಕಾರದ ಮೂಲಕ ಒತ್ತಡ ಹಾಕುವುದರ ಮೂಲಕ ಪಿಡಿಓ ರವರನ್ನು ವರ್ಗಾವಣೆ ಮಾಡಲಾಗುತ್ತಿದೆ.ವರ್ಗಾವಣೆಗೊಂಡ ಅಭಿವೃದ್ಧಿ ಅಧಿಕಾರಿಗಳು ಕನಿಷ್ಠ ಒಂದು ಗ್ರಾಮ ಪಂಚಾಯಿತಿಯಲ್ಲಿ ಒಂದು ವರ್ಷವಾದರೂ ಕರ್ತವ್ಯ ನಿರ್ವಹಿಸಿದರೆ ಆ ಪಂಚಾಯತಿಯ ಸಂಪೂರ್ಣ ಮಾಹಿತಿ ಸಿಗುತ್ತದೆ.

ಅಭಿವೃದ್ಧಿ ಅಧಿಕಾರಿಯ ವರ್ಗಾವಣೆ ನಂತರ  ಬಯೋಮೆಟ್ರಿಕ್ ( ತಂಪು ) ಬರಬೇಕಾದರೆ ಕನಿಷ್ಠ 15 ರಿಂದ 20 ದಿನಗಳ ಸಮಯ ತೆಗೆದುಕೊಳ್ಳುತ್ತಾರೆ.ಆ ದಿನಗಳ ಅಂತರದಲ್ಲಿ ಮನರೇಗಾ ಸೇರಿದಂತೆ ಗ್ರಾಮ ಪಂಚಾಯಿತಿಯ ಇತರ ಕಾರ್ಯಗಳು ಸ್ಥಗಿತಗೊಳ್ಳುತ್ತಿವೆ.ನರೇಗಾ ಕೆಲಸಗಳು ಚಾಲ್ತಿಯಲ್ಲಿದ್ದು ಪಿಡಿಒ ಬದಲಾವಣೆಯಿಂದ ಬಯೋಮೆಟ್ರಿಕ್ ಸಮಸ್ಯೆಯಿಂದ ಕೆಲಸಗಳು ಸ್ಥಗಿತಗೊಳ್ಳುತ್ತವೆ.ಇದರಿಂದ ಕೂಲಿ ಕಾರ್ಮಿಕರಿಗೆ ಕೆಲಸ ಮಾಡಿದವರಿಗೆ ಹಣ ಜಮಾ  ಆಗುವುದಿಲ್ಲ.ಇದು ಅಭಿವೃದ್ಧಿ ಅಧಿಕಾರಿಗಳ ಪದೇ ಪದೇ ವರ್ಗಾವಣೆಯಿಂದ ಆಗುವ ದೊಡ್ಡ ಸಮಸ್ಯೆಯಾಗಿದೆ.

ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು ನಾಲ್ಕು ತಿಂಗಳುಗಳ ಕಾಲ ಉದ್ಯೋಗ ಖಾತ್ರಿ ಕೆಲಸಗಳು ಸ್ಥಗಿತಗೊಂಡಿವೆ.ಕೆಲಸಗಳು ಅರ್ಧಕ್ಕೆ ನಿಂತಿವೆ.ಪಿಡಿಒ ವರ್ಗಾವಣೆಯಿಂದ ಸ್ಥಗಿತಗೊಂಡಿವೆ.ಇದರಿಂದ ಒಂದು ಕುಟುಂಬಕ್ಕೆ ಕೊಡುವ ನೂರು ದಿನಗಳ ದಿನಗೂಲಿ ಕೆಲಸವು 20 ರಿಂದ 30 ದಿನಕ್ಕೆ ಸಂಪೂರ್ಣವಾಗಿ ಮುಗಿದು ಹೋಗುತ್ತಿವೆ.ಇದು ಕೂಲಿ ಕಾರ್ಮಿಕರ ಬಲವಾದ ಆರೋಪವಾಗಿದೆ.

***

 ಸರಕಾರದಿಂದ ಕಟ್ಟುನಿಟ್ಟಿನ ನಿಯಮ ಪಾಲನೆಯಾಗಬೇಕು.ಒಂದು ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡ ಅಭಿವೃದ್ಧಿ ಅಧಿಕಾರಿ ಕನಿಷ್ಠ ಒಂದು ವರ್ಷವಾದರೂ ವರ್ಗಾವಣೆ ಮಾಡಬಾರದು.ಸರ್ಕಾರದ ಕಡ್ಡಾಯ ನಿಯಮಗಳನ್ನು ಮೇಲಾಧಿಕಾರಿಗಳು ಪಾಲಿಸುತ್ತಿಲ್ಲ.ಯಾದಗಿರಿ ಜಿಲ್ಲೆಯಲ್ಲಿ ಅಭಿವೃದ್ಧಿ ಅಧಿಕಾರಿಗಳನ್ನು ವಾರದೊಳಗೆ ಒಬ್ಬರಂತೆ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಬದಲಾವಣೆ ಮಾಡುತ್ತಾರೆ.ಇದರಿಂದ ಗ್ರಾಮ ಪಂಚಾಯಿತಿಯ ಅಭಿವೃದ್ಧಿಯು ಕುಂಠಿತಗೊಳ್ಳುತ್ತಿದೆ.ಮನರೇಗಾದಲ್ಲಿ ಸರ್ಕಾರ ನಿಗದಿಪಡಿಸಿದ ನೂರು ದಿನಗಳು ಪಿಡಿಒ ವರ್ಗಾವಣೆಯಿಂದ ಕೆಲಸ ಮಾಡಿದರೂ ಕೂಲಿ ಹಣ ಸಿಗದೇ ಪರದಾಡುವ ಸ್ಥಿತಿ ಕೂಲಿಕಾರ್ಮಿಕರಿಗೆ ಉಂಟಾಗುತ್ತಿದೆ. ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಪಿಡಿಓ ವರ್ಗಾವಣೆ ಮಾಡುವ ಅಧಿಕಾರವಿರುವುದರಿಂದ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳನ್ನು ಅಧಿಕಾರಿಗಳು ಪಾಲಿಸಬೇಕಿದೆ.

“ದಾವಲಸಾಬ್ ನಧಾಫ್
ಜಿಲ್ಲಾಧ್ಯಕ್ಷರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಯಾದಗಿರಿ

 ***

 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವುದು,ಫೋನ್ ಕರೆ ಸ್ವೀಕರಿಸದೆ ಇರುವುದು,ಗ್ರಾಮ ಪಂಚಾಯಿತಿಗಳಿಗೆ ಬಾರದೆ ಇರುವುದು,ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮಗಳಲ್ಲು ವಾರ್ಡ್ ವಾರು ಮತ್ತು  ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ಮಾಡದೆ ಇರುವುದು,ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ಜೊತೆ ಅಭಿವೃದ್ಧಿ ಅಧಿಕಾರಿಗಳ ನಡುವೆ ಒಮ್ಮತದ ಕೊರತೆ ಹೀಗೆ ಹಲವು ಸಮಸ್ಯೆಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬದಲಾವಣೆಗೆ ಕಾರಣಗಳಾಗುತ್ತಿವೆ.

 

Leave a Reply

Your email address will not be published. Required fields are marked *