ಶಹಾಪುರ:ರೈತರು ಹವಾಮಾನಕ್ಕನುಗುಣವಾಗಿ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಬೆಳೆದ ಬೆಳೆಯ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ಇಂದು ತಾಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ರೈತರು ಭೂಮಿಯ ಮಣ್ಣನ್ನು ಸ್ವಾಬ್ ಪರೀಕ್ಷೆ ಪ್ರತಿ ವರ್ಷ ಮಾಡಿಸಬೇಕು.ಇದರಿಂದ ಭೂಮಿಯಲ್ಲಿ ಯಾವ ಬೆಳೆ ಬೆಳೆಯುವುದು ಸೂಕ್ತ ಎನ್ನುವ ಮಾಹಿತಿ ಸಿಗುತ್ತದೆ.ನಗರದ ಭಿ,ಗುಡಿಯಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಬೆಳೆದಿರುವ ಪ್ಲಾಟುಗಳಲ್ಲಿ ಹಾಕಿದ ಬೆಳೆಗಳನ್ನು ವೀಕ್ಷಿಸಿ ಅವರ ಮಾರ್ಗದರ್ಶನದಲ್ಲಿ ಬೆಳೆಯನ್ನು ಬೆಳೆಯುವುದು ಸೂಕ್ತ ಎಂದರು.
ತಾಲೂಕು ಕೃಷಿ ಇಲಾಖಾ ಕಛೇರಿಯಲ್ಲಿ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬೆಳೆದ ಬೆಳೆಗಳ ಉತ್ಪಾದನೆ ಕಡಿಮೆಯಾದಾಗ ಬೆಲೆ ಹೆಚ್ಚಾಗುತ್ತದೆ.ಉತ್ಪಾದನೆ ಹೆಚ್ಚಾದಾಗ ಬೇಡಿಕೆ ಕಡಿಮೆಯಾಗಿ ಬೆಲೆ ಕಡಿಮೆಯಾಗುತ್ತದೆ.ರೈತರು ವಿಚಾರ ಮಾಡಿ ಬೆಳೆಗಳನ್ನು ಬೆಳೆಯಬೇಕು ಎಂದು ರೈತರಿಗೆ ಕಿವಿಮಾತು ಹೇಳಿದರು.
ಇಂದಿನಿಂದ ಮೂರು ದಿನಗಳ ಕಾಲ ಸಮಗ್ರ ಕೃಷಿ ಅಭಿಯಾನದಲ್ಲಿ ರೈತರ ಮನೆ ಬಾಗಿಲಿಗೆ ಅಧಿಕಾರಿಗಳು ಬರುತ್ತಿದ್ದು, ಉತ್ಪಾದಕತೆ, ತಾಂತ್ರಿಕತೆಯ ಬಗ್ಗೆ ರೈತರಿಗೆ ತಿಳಿಸುವರು. ಬಿತ್ತನೆ ಬೀಜಗಳು, ಬೆಳೆ ಸಮೀಕ್ಷೆ, ಪ್ರದಾನ ಮಂತ್ರಿ ಫಸಲ್ ಭೀಮಾ ಯೋಜನೆಡಿಯಲ್ಲಿ ಸರ್ವ ರೈತರು ವಿಮಾ ಮಾಡಿಕೊಳ್ಳಲು ಜು,31 ಕೊನೆಯ ದಿನವಾಗಿದ್ದು ರೈತರು ಈ ಕುರಿತು ಹೆಸರುಗಳನ್ನು ನೊಂದಾವಣಿ ಮಾಡಿಕೊಳ್ಳಬೇಕು.ಸಂಜೀವಿನಿ ಸಂಚಾರಿ ವಾಹನವು ಕೃಷಿ ಬೆಳೆಗಳಿಗೆ ಕಾಡುವ ರೋಗ, ಕೀಟಗಳ ಬಾಧೆ, ಮಣ್ಣಿನ ಪರೀಕ್ಷೆ, ಭೂಮಿಯ ನಿರ್ವಹಣೆಯ ಬಗ್ಗೆ ಮಾಹಿತಿ ನೀಡುವರು. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ಹೇಳಿದರು.
ಕೃಷಿ ಸಂಜೀವಿನಿ ಸಂಚಾರಿ ವಾಹನಕ್ಕೆ ಚಾಲನೆ ನೀಡಿದ ಶಾಸಕರು, ಬೆಳೆ ಸಮೀಕ್ಷೆ ಮೊಬೈಲ್ ಆಪ್ ವೀಕ್ಷಿಸಿದರು.
ಕೃಷಿ ಇಲಾಖೆ ಉಪ ನಿರ್ಧೇಶಕರು ಮುತ್ತುರಾಜ ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿ ಇಲಾಖೆ ಯೋಜನೆಗಳ ಕುರಿತು ವಿಸ್ತಾರದ ಮಾಹಿತಿ ವಿವರಿಸಿದರು. ಸಹಾಯಕ ಕೃಷಿ ನಿರ್ಧೆಶಕರಾದ ಸುನೀಲಕುಮಾರ ಸಮಗ್ರ ಕೃಷಿ ವಿವರಣೆ ಮತ್ತು ರೈತರ ಅನೂಕೂಲತೆಗಳ ಕುರಿತು ಮಾತನಾಡಿದರು.
ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರಾದ ಎಸ್.ಎಸ್.ಅಬೀದ್, ಪಶು ಸಂಗೋಪನ ಸಹಾಯಕ ನಿರ್ದೇಶಕರಾದ ಷಣ್ಮುಖಪ್ಪ ಗೊಂಗಡಿ ಸೇರಿದಂತೆ ರೇಷ್ಮೆ, ಅರಣ್ಯ, ಕಂದಾಯ ಇಲಾಖೆಯ ಅಧಿಕಾರಿಗಳು,ಹಯ್ಯಳ ಬಿ ಹೋಬಳಿಯ ಕೃಷಿ ಇಲಾಖಾ ಅಧಿಕಾರಿಯಾದ ಅಂಬರೀಶ್ ಸೇರಿದಂತೆ ತಾಲೂಕಿನ ಎಲ್ಲಾ ಹೋಬಳಿ ಮಟ್ಟದ ಎಲ್ಲಾ ಕೃಷಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಪಂಚಾಯಿತಿ ಅಧ್ಯಕ್ಷರು, ತಾಲೂಕಿನ ರೈತರು,ರೈತ ಮುಖಂಡರು ಉಪಸ್ಥಿತರಿದ್ದರು.