ಶಹಾಪುರಃ ದಕ್ಷಿಣ ಭಾರತಕ್ಕೆ ಜೀವನದಿ ಸೃಷ್ಟಿಸುವ ಮೂಲಕ ಗಣೇಶ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಿದ ಎಂಬ ಪುರಾಣ ಕಥೆಯನ್ನು ಓದಿದರೆ ಗಣೇಶನನ್ನು ಹೆಮ್ಮೆಯೊಂದಿಗೆ ಕೃತಾರ್ಥರಾಗಿ ಪೂಜಿಸಬೇಕಿರುವದು ನಮ್ಮೆಲ್ಲರ ಕರ್ತವ್ಯವೆಂಬುದು ಮನಗಾಣಬೇಕಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಅಭಿವ್ಯಕ್ತಪಡಿಸಿದರು.
ಇಲ್ಲಿನ ಲಕ್ಷ್ಮಿ ನಗರದ ಗಣೇಶ ಮಂದಿರದ ಆವರಣದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಆಯೋಜಕರು ಆಯೋಜಿಸಿದ್ದ ರಸಮಂಜರಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪುರಾಣ, ಪುಣ್ಯ ಕಥೆಗಳಲ್ಲಿ ಬರುವಂತೆ ಸಪ್ತ ಮಹರ್ಷಿಗಳಲ್ಲಿ ಓರ್ವರಾದ ಅಗಸ್ತ್ಯ ಮಹರ್ಷಿಗಳು ದಕ್ಷಿಣ ಭಾರತದ ಜನರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಒಂದು ನದಿಯನ್ನು ಸೃಷ್ಠಿಸಬೇಕೆಂಬ ಮಹಾದಾಸೆಯೊಂದಿಗೆ ಅಪಾರ ತಪಸ್ಸಿನಿಂದ ದೇವಾನುದೇವತೆಗಳ ಕೃಪೆ ಪಡೆದು ನದಿ ಸೃಷ್ಠಿಸುವ ವರ ಪಡೆದಿದ್ದರು. ದೇವಾನುದೇವತೆಗಳು ಪರಸು ಬಟ್ಟಲಿನಲ್ಲಿ ಗಂಗೆಯನ್ನು ತುಂಬಿ ಇದನ್ನು ಯಾವ ಜಾಗದಲ್ಲಿ ಧಾರೆ ಎರೆಯತ್ತಿರೋ ಅಲ್ಲಿಯೇ ನದಿ ಉದ್ಭವಿಸಲಿದೆ ಎಂದು ವರ ನೀಡಿದ್ದರು. ಆ ಬಟ್ಟಲನ್ನು ತೆಗೆದುಕೊಂಡ ಮಹರ್ಷಿಗಳು ನಡೆದುಕೊಂಡು ಹೊರಟೆ ಬಿಟ್ಟರು. ಇನ್ನೇನು ಕೊಡುಗು ಸಮೀಪಿಸುತ್ತಿದ್ದಂತೆ ಸ್ವಲ್ಪ ವಿಶ್ರಾಂತಿ ಪಡೆಯಲು ಗಿಡದ ಕೆಳಗಡೆ ಮಲಗಿದ್ದರಂತೆ. ಆಗ ಬಾಲ ಗಣೇಶನಾಗಿ ಅವತರಿಸಿ ಅಲ್ಲಿಗೆ ಬಂದ ಗಣೇಶ ಆ ಪರಸು ಬಟ್ಟಲನ್ನು ತೆಗೆದು ಅಲ್ಲಿಯೇ ಧರೆಗೆ ಎರಗಿ ಬಿಡುತ್ತಾನೆ ಆಗ ಉದ್ಭವಿಸಿದ್ದೆ ನಮ್ಮ ಕಾವೇರಿ ನದಿ. ಹೀಗಾಗಿ ಕರುನಾಡಿನ ಜನತೆಗೆ ಗಣೇಶನ ಕೃಪಾಕಟಾಕ್ಷವಿದೆ. ಗಣೇಶನನ್ನು ನಾವು ಪುರಾಣ ಕಾಲದಿಂದಲೂ ಮರೆತಿಲ್ಲ ಮರೆಯಬಾರದು ವರ್ಷಕ್ಕೊಮ್ಮೆ ಅಲ್ಲ ನಿತ್ಯ ಪೂಜಿಸಬೇಕೆಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಯಪ್ಪ ಸಾಲಿಮನಿ, ಕರಣ ಸುಬೇದಾರ, ಉದ್ಯಮಿ ಗುರು ಮಣಿಕಂಠ, ರಮೇಶ ನಗನೂರ, ಡಾ.ವಿದ್ಯಾ ಸಿ.ಚಿಕ್ಕಮಠ, ಸಾಂಸ್ಕೃತಿಕ ಸಂಘಟಕ ಸಂಗನಗೌಡ ಪಾಟೀಲ್ ಅನವಾರ, ಶ್ರೀರಾಮ ಸೇನೆ ಅಧ್ಯಕ್ಷ ಶಿವು ಶಿರವಾಳ, ಉಪಾಧ್ಯಕ್ಷ ಮಹೇಶ ಉಪಸ್ಥಿತರಿದ್ದರು. ಯುವ ಗಾಯಕ ಮಹೇಶ ಪತ್ತಾರ ಜಾನಪದ ಹಾಗೂ ತತ್ವಪದಗಳನ್ನು ಹಾಡಿ ರಂಜಿಸಿದರು. ಮಕ್ಕಳು ವಿವಿಧ ಹಾಡಿಗೆ ನೃತ್ಯ ಮಾಡುವ ಮೂಲಕ ನೆರೆದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ನೃತ್ಯ ಮಾಡಿದ ಮಕ್ಕಳೆಲ್ಲರಿಗೂ ಆಯೋಜಕರಿಂದ ಮೆಡಲ್ ಹಾಕುವ ಮೂಲಕ ಗೌರವಿಸಲಾಯಿತು.