ಬೀದರ್ : ನರೆಗಾ ಯೋಜನೆಯಡಿ ಜಿಲ್ಲೆಯಲ್ಲಿ ಭರದಿಂದ ಸಾಗಿದ ಕೂಲಿಕೆಲಸ :
ಡಾ.ಗಿರೀಶ ದಿಲೀಪ್ ಬದೋಲೆ
” ಗ್ರಾಮೀಣ ಬಡಕುಟುಂಬಗಳಿಗೆ ವರದಾನದಂತಿರುವ ಮಹಾತ್ಮಗಾಂಧಿ ನರೆಗಾ ಯೋಜನೆಯಡಿ ಜಿಲ್ಲೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದ್ದು ಜಿಲ್ಲೆಯಾದ್ಯಂತ ಕೂಲಿ ಕೆಲಸ ಭರದಿಂದ ಸಾಗಿದೆ.ಎಪ್ರಿಲ್ ಮೊದಲವಾರದಲ್ಲಿ 2025 ನೇ ಸಾಲಿನ ಮನರೆಗಾ ಯೋಜನೆಯಡಿ ಅನುಮೋದಿಸಲ್ಪಟ್ಟ ಕ್ರಿಯಾಯೋಜನೆಗಳ ಕಾಮಗಾರಿಗಳನ್ನು ಪ್ರಾರಂಭಿಸಿದ್ದು ಎಪ್ರಿಲ್ 19 ರಂದು ಇದ್ದಂತೆ ಜಿಲ್ಲೆಯ 185 ಗ್ರಾಮ ಪಂಚಾಯತಿಗಳಲ್ಲಿ 143 ಗ್ರಾಮ ಪಂಚಾಯತಿಗಳಲ್ಲಿ ಕೂಲಿ ಕೆಲಸ ಪ್ರಾರಂಭವಾಗಿದ್ದು 24247 ಜನ ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ.
ಈ ತಿಂಗಳಾಂತ್ಯಕ್ಕೆ 50,000 ಜನ ಕೂಲಿಕಾರರಿಗೆ ಕೆಲಸ ನೀಡಲಾಗುತ್ತದೆ. ಮೇ ತಿಂಗಳಲ್ಲಿ ಒಂದು ಲಕ್ಷ ಜನ ಕೂಲಿಕಾರರಿಗೆ ಕೆಲಸ ನೀಡಲಾಗುವುದು.ಮನರೆಗಾ ಯೋಜನೆಯಡಿ ಕೆಲಸ ನೀಡುವುದರಿಂದ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಅತಿ ಸಣ್ಣ ರೈತರು ಮತ್ತು ಮಹಿಳೆಯರ ಬದುಕಿನ ಬವಣೆ ನೀಗಲು ಸಹಕಾರಿಯಾಗುತ್ತದೆ” ಎಂದು ತಿಳಿಸಿರುವ ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾಕ್ಟರ್ ಗಿರೀಶ ದಿಲೀಪ್ ಬದೋಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದ ಜನತೆ ಉದ್ಯೋಗಕ್ಕಾಗಿ ನಗರಪ್ರದೇಶಗಳಿಗೆ ವಲಸೆ ಹೋಗದೆ ಅವರವರ ಗ್ರಾಮಗಳಲ್ಲೇ ಉದ್ಯೋಗ ಖಾತ್ರಿ ಯೋಜನೆಯಡಿ ನೊಂದಾಯಿಸಿಕೊಂಡು ಕೆಲಸ ಮಾಡಲು ಮನವಿ ಮಾಡಿದ್ದಾರೆ.ಉದ್ಯೋಗ ಖಾತ್ರಿ ಯೋಜನೆಯಡಿ ಗಂಡು ಹೆಣ್ಣು ಎನ್ನುವ ಭೇದವಿಲ್ಲದೆ ಸಮಾನ ಕೂಲಿ ನೀಡುವುದಲ್ಲದೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೂಲಿಯ ದರವೂ ಹೆಚ್ಚಿಗೆ ಆಗಿದ್ದು ಕೂಲಿಕಾರರಿಗೆ ಪ್ರತಿದಿನ 370 ರೂಪಾಯಿಗಳ ಕೂಲಿ ಸಿಗುತ್ತಿದ್ದು ಗ್ರಾಮೀಣಪ್ರದೇಶದ ದುಡಿಯುವ ವರ್ಗದ ಜನತೆ ಮನರೆಗಾ ಯೋಜನೆಯ ಪ್ರಯೋಜನ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.