ಅಹಿಂದ ಜನರಿಗೆ ಅಪಮಾನ ಮಾಡಿದ ಕೆ.ಬಿ.ಕೋಳಿವಾಡ ಕ್ಷಮೆಯಾಚಿಸಲಿ : ಅಯ್ಯಪ್ಪಗೌಡ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಕೇಳುತ್ತಿರುವ ಮಾಜಿ ಸ್ಪೀಕರ್ ಕೆ. ಬಿ. ಕೋಳಿವಾಡರು ಶೋಷಿತ, ಅಹಿಂದ ವರ್ಗಕ್ಕೆ ಮಾಡಿದ ಅಪಮಾನ. ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಅಹಿಂದ ಜನ ಸಂಘಟನೆಯ ರಾಜ್ಯಧ್ಯಕ್ಷರು ಅಯ್ಯಪ್ಪಗೌಡ ಅವರು ಒತ್ತಾಯಿಸಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿದ  ಅವರು, ಸಿದ್ದರಾಮಯ್ಯರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ. 2023ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವಾಗ ಮುಡಾ ವಿಷಯದಲ್ಲಿ ಸಿದ್ದರಾಮಯ್ಯ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವುದು ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ನಂತರದ 77 ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಶೋಷಿತ ವರ್ಗಗಳಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿರುವುದು ಕೆಲವೇ ಬಾರಿ ಮಾತ್ರ. ಸಿದ್ದರಾಮಯ್ಯರು ದೇವರಾಜ ಅರಸು ಬಳಿಕ ಐದು ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದವರು ಎಂಬ ಹೆಗ್ಗಳಿಕೆ ಹೊಂದಿದ್ದಾರೆ. 2013-2018ರ 5 ವರ್ಷಗಳ ಕಾಲ ಸುಭದ್ರ ಆಡಳಿತ, ಜನಪರ ಕಾರ್ಯಕ್ರಮಗಳ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಆಡಳಿತ ನೀಡಿದ್ದಾರೆ. ಮತ್ತೆ ಮುಖ್ಯಮಂತ್ರಿಯಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಬಡವರು, ಹಿಂದುಳಿದವರು, ಶೋಷಿತರು, ದಮನಿತರ ಪಾಲಿನ ಆಶಾಕಿರಣವಾಗಿದ್ದಾರೆ ಎಂದು ತಿಳಿಸಿದ್ದಾರೆ.ಆದ್ರೆ, ಸಿದ್ದರಾಮಯ್ಯರು ರಾಜೀನಾಮೆ ನೀಡಬೇಕೆಂದಿರುವ ಕೋಳಿವಾಡ ಅವರು ಅಹಿಂದ, ಶೋಷಿತರ ಮತ ಪಡೆದಿಲ್ಲವೇ? ಸಿದ್ದರಾಮಯ್ಯರ ವರ್ಚಸ್ಸಿನಿಂದಲೇ ಈ ಹಿಂದೆ ಕೋಳಿವಾಡ ಅವರು ಗೆದ್ದಿರುವುದು, ಸಿದ್ದರಾಮಯ್ಯರ ಪರಿಶ್ರಮದಿಂದಲೇ ಕಾಂಗ್ರೆಸ್ 136 ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಇದನ್ನು ಕೋಳಿವಾಡ ಅವರು ಗಮನದಲ್ಲಿ ಇಟ್ಟುಕೊಂಡು ಹೇಳಿಕೆ ನೀಡಬೇಕು ಎಂದು ಹೇಳಿದ್ದಾರೆ.

ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ, ವಿಧಾನಸಭೆ ಸ್ಪೀಕರ್ ಆಗಿದ್ದ ಕೆ.ಬಿ. ಕೋಳಿವಾಡ ಹಾಗೂ ಅವರ ಪುತ್ರ ಪ್ರಕಾಶ್ ಕೋಳಿವಾಡ ಅವರಿಗೆ ಮತ ನೀಡಿ ಶೋಷಿತ, ಅಹಿಂದ ವರ್ಗದವರು ಮತ ನೀಡಿ ಗೆಲ್ಲಿಸಿಲ್ಲವೇ. ರಾಜ್ಯದ ಶೋಷಿತ, ಅಹಿಂದ ವರ್ಗಗಳು ಮುಖ್ಯಮಂತ್ರಿ ಸಿದ್ದರಾಮಯ್ಯರ ಪರವಾಗಿ ನಿಂತಿದೆ. ಕಾಂಗ್ರೆಸ್ ಹೈಕಮಾಂಡ್, ಸಚಿವರು, ಶಾಸಕರು ಸಿಎಂ ಪರ ನಿಂತಿದ್ದರೂ ಇಂಥ ವೇಳೆಯಲ್ಲಿ ಹಿರಿಯ ರಾಜಕಾರಣಿಯಾಗಿ ಬಹಿರಂಗವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಧ್ಯಮಗಳಿಗೆ
ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಕೆ. ಬಿ. ಕೋಳಿವಾಡ ಅವರು ಶೋಷಿತ “ಅಹಿಂದ” ವರ್ಗಗಳಿಗೆ ಮಾಡಿರುವ ಘೋರ ಅವಮಾನ. ಕೂಡಲೇ ಕೋಳಿವಾಡರ ನಡವಳಿಕೆ ಖಂಡಿಸುತ್ತೇವೆ. ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಅಯ್ಯಪ್ಪಗೌಡ ಆಗ್ರಹಿಸಿದ್ದಾರೆ.

About The Author