ರಾಯರು ಭಕ್ತರಿಗೆ ಸಕಲ ಅಭೀಷ್ಟಗಳನ್ನು ದಯಪಾಲಿಸುವ ಮಹಾನುಭಾವರು

ಶಹಾಪುರ: ಕಲಿಯುಗದ ಕಲ್ಪತರು ಶ್ರೀ ಗುರುರಾಘವೇಂದ್ರ ಸ್ವಾಮಿಗಳನ್ನು ಪೂಜಿಸದ ಭಕ್ತರಿಲ್ಲ, ನಂಬಿದ ಭಕ್ತರನ್ನು ಸದಾ ಕಾಪಾಡುತ್ತಿರುವ ರಾಯರು ಭಕ್ತರಿಗೆ ಸಕಲ ಅಭೀಷ್ಟಗಳನ್ನು ದಯಪಾಲಿಸುವ ಮಹಾನುಭಾವರು ಎಂದು ಪಂಡಿತರಾದ ನಾರಾಯಣಾಚಾರ್ಯ ಐ.ಜಿ ಸುರುಪುರ ತಿಳಿಸಿದರು.ಹಳಪೇಟೆಯಲ್ಲಿ ಶ್ರೀ ಗುರುಸಾರ್ವಭೌಮರ ಪೂರ್ವಾರಾಧನೆಯ ನಿಮಿತ್ಯ ಪ್ರವಚನ ನೀಡಿದ ಅವರು, ಶ್ರೀ ಗುರುರಾಯರು ತಾವು ಸಂಪಾದಿಸಿರುವ ತಪಸ್ಸಿನ ಫಲವನ್ನು ಭಕ್ತ ಜನಕೋಟಿಗೆ ಹಂಚುತ್ತಿದ್ದಾರೆ, ಅದಕ್ಕಾಗಿಯೇ ಅಪ್ಪಣಾಚಾರ್ಯರು ತಾವು ಬರೆದಿರುವ ಶ್ರೀ ರಾಘವೇಂದ್ರ ಸ್ತೋತ್ರದಲ್ಲಿ ರಾಯರ ಮಹಿಮೆಯನ್ನು ಈ ರೀತಿ ಉಲ್ಲೇಖಿಸಿದ್ದಾರೆ.
  ಪ್ರಹ್ಲಾದವತಾರ ಕಾಲದಲ್ಲಿ ಶ್ರೀಹರಿಯು ನರಸಿಂಹ ಅವತಾರದಲ್ಲಿ ಶ್ರೀ ಪ್ರಹ್ಲಾದರನ್ನು ಕುರಿತು, ನಿನ್ನನ್ನು ಅನುಸರಿಸಿಕೊಂಡು ಸೇವಿಸುವವರು ಲೋಕದಲ್ಲಿ ನನ್ನ ಭಕ್ತರಾಗುತ್ತಾರೆ ಎಂದು ಅಪ್ಪಣೆ ಕೊಟ್ಟಿರುವುದಾಗಿ ಭಾಗವತದಲ್ಲಿ ಹೇಳಿರುವುದರಿಂದ ಪ್ರಹ್ಲಾದಾವತಾರರಾದ ಶ್ರೀ ಗುರುರಾಜರನ್ನು ಯಾರು ಸೇವಿಸುವರೋ, ಯಾರು ಭಕ್ತಿಯಿಂದ ಪೂಜಿಸುವರೋ ಅಂತಹ ಭಕ್ತರು ಶ್ರೀಹರಿಯ ಭಕ್ತರಾಗಿ ತಮ್ಮ ಮನೋಭಿಷ್ಟಗಳನ್ನು ಪಡೆಯುವುದರಲ್ಲಿ ಸಂದೇಹವಿಲ್ಲ, ನಿರಂತರವಾಗಿ ರಾಯರ ಸೇವೆಯನ್ನು ಸರ್ವರು ಮಾಡಬೇಕು ಎಂದರು.ಬೆಳಗ್ಗೆ ಅಷ್ಟೋತ್ತರ, ವಿಶೇಷ ಅಲಂಕಾರ, ಪೂಜೆ, ಪಂಚಾಮೃತಾಭೀಷೇಕ,ಮಹಾಮಂಗಳಾರತಿ, ಜರುಗಿತು.ಅಧ್ಯಕ್ಷ ತಿರುಮಲಾಚಾರ್ಯ ಭಕ್ರಿ, ವಾಸುದೇವಾಚಾರ್ಯ ಸಗರ, ಅರ್ಚಕ ನರಸಿಂಹಾಚಾರ್ಯ ರೊಟ್ಟಿ, ವಿಠ್ಠಲಾಚಾರ್ಯ ಪ್ರತಿನಿಧಿ ಸೇರಿದಂತೆ ಸಮಸ್ತ ಭಕ್ತರು ಪಾಲ್ಗೊಂಡು ರಾಯರ ಕೃಪಾಶೀರ್ವಾದಕ್ಕೆ ಪಾತ್ರರಾದರು.

Leave a Reply

Your email address will not be published. Required fields are marked *