ಅಹಿಂದ ವತಿಯಿಂದ ಪ್ರತಿಭಟನೆ : ಮುಖ್ಯಮಂತ್ರಿ ಕೆಳಗಿಳಿಸುವ ಬಿಜೆಪಿ ಜೆಡಿಎಸ್ ತಂತ್ರ ಫಲಿಸುವುದಿಲ್ಲ : ಶಾಂತಗೌಡ

ಶಹಾಪುರ : ರಾಜ್ಯದಲ್ಲಿ ಬಡವರಿಗೆ ಉಚಿತ ಅಕ್ಕಿ ಭಾಗ್ಯ, ಬಡವರಿಗೆ ಎರಡು ಸಾವಿರ ರುಪಾಯಿ ಸೇರಿದಂತೆ ಶೋಷಿತರ ಪರ ನಿಂತ ಕರ್ನಾಟಕ ಕಳಂಕ ರಹಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಬಿಜೆಪಿ ಮತ್ತು ಜೆಡಿಎಸ್ ನವರು ಪಾದಯಾತ್ರೆ ಕೈಗೊಂಡಿರುವುದು ರಾಜಕೀಯ ಸೇಡಿನ ತಂತ್ರ ಎಂದು ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ನಿರ್ದೇಶಕರಾದ ಶಾಂತಗೌಡ ನಾಗನಟಗಿ ಕಿಡಿ ಕಾರಿದ್ದಾರೆ. ಯಾದಗಿರಿ ನಗರದಲ್ಲಿ ಅಹಿಂದ ವತಿಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಒಬ್ಬ ಹಿಂದುಳಿದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಿರುವುದು ಬಿಜೆಪಿ ಮತ್ತು ಜೆಡಿಎಸ್ ನವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಇಂದಿನ ಅವಧಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವರು ರಾಜ್ಯವನ್ನೇ ಲೂಟಿ ಮಾಡಿದ್ದಾರೆ. ರಾಜ್ಯದ ಜನರು ಎಲ್ಲವನ್ನು ನೋಡುತ್ತಿದ್ದಾರೆ. ಈಗ ರಾಜ್ಯಪಾಲರನ್ನು ಬಳಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೆಳಗಿಳಿಸುವ ತಂತ್ರವನ್ನು ಬಿಜೆಪಿಯವರು ಅನುಸರಿಸುತ್ತಿದ್ದಾರೆ ಎಂದು ಪಾದಯಾತ್ರೆಯನ್ನು ಲೇವಡಿ ಮಾಡಿದರು. ಬಿಜೆಪಿ ಮತ್ತು ಜೆಡಿಎಸ್ ನವರ ಈ ತಂತ್ರ ಯಾವುದೇ ಕಾರಣಕ್ಕೂ ಫಲಕಾರಿ ಆಗುವುದಿಲ್ಲ. ಇವರ ಕುತಂತ್ರ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಚ್ಚರಿಸಿದರು.

About The Author