ಕರ್ನಾಟಕ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮರಿಗೌಡ ಹುಲ್ಕಲ್ ಇನ್ನಿಲ್ಲ

ಶಹಾಪುರ : ನೇರ ದಿಟ್ಟ ನಡೆ-ನುಡಿಗೆ ಹೆಸರಾಗಿದ್ದು ರಾಜ್ಯ ಕೆಪಿಸಿಸಿ ಉಪಾಧ್ಯಕ್ಷರು, ಹಿರಿಯರಾದ ಮರಿಗೌಡ ಪಾಟೀಲ್ ಹುಲ್ಕಲ್(64) ಹೃದಯಾಘಾತದಿಂದ ನಗರದ ಸ್ಪಂದನ  ಆಸ್ಪತ್ರೆಯಲ್ಲಿ ಸಾವನ್ನಪಿದ್ದಾರೆ.ಮಂಗಳವಾರ ರಾತ್ರಿ 7-30 ರ ಸುಮಾರಿಗೆ ಎದೆ ನೋವು ಕಾಣಿಸಿ ಕೊಂಡಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ದಿಢೀರನೆ ಹೃದಯಘಾತ ಸಂಭವಿಸಿದ್ದು. ಚಿಕಿತ್ಸೆ ಸ್ಪಂದಿಸದೇ ನಿಧನರಾಗಿದ್ದಾರೆ.

1997 ರಲ್ಲಿ ಕುರಿ ಮತ್ತು ಉಣ್ಣೆ ನಿಗಮ ಮಂಡಳಿಯ ಅಧ್ಯಕ್ಷರಾಗಿ, 2014ರಲ್ಲಿ ಕೃಷ್ಣಾ ಕಾಡಾ ಅಧ್ಯಕ್ಷರಾಗಿ, ಪ್ರಸ್ತುತ ತೊಗರಿ ನಿಗಮ ಮಂಡಳಿಯ ಅಧ್ಯಕ್ಷರಾಗಿದ್ದರು. ಎರಡು ಬಾರಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದ ಅವರು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಮರಿಗೌಡ ಪಾಟೀಲ್ ಹುಲ್ಕಲ್ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮವಾದ ಹುಲ್ಕಲ್ ಗ್ರಾಮದ ಜಮೀನಿನಲ್ಲಿ ಜು.24 ರಂದು ಬುಧವಾರ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಕಟ್ಟಾಳು.ಸಿದ್ದರಾಮಯ್ಯ ಮತ್ತು ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರ ಆಪ್ತರಾಗಿದ್ದ ಮರಿಗೌಡ ಪಾಟೀಲ್ ಹುಲ್ಕಲ್ ಅವರು ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ ನಡೆದುಕೊಂಡು ಬಂದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಉತ್ತಮ ಭಾಂಧವ್ಯ ಇಟ್ಟುಕೊಂಡಿದ್ದ ಅವರು ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಪಾಟೀಲರ ಅಗಲಿಕೆ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ.

ಮರಿಗೌಡ ಹುಲ್ಕಲ್ ನಿಧನಕ್ಕೆ ಗಣ್ಯರ ಸಂತಾಪ.
ಹಿರಿಯರಾಗಿದ್ದ ಮರಿಗೌಡ ಪಾಟೀಲ್ ಹುಲ್ಕಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ, ಯಾದಗಿರಿ ಶಾಸಕ ಚೆನ್ನರೆಡ್ಡಿ ಪಾಟೀಲ್ ತುನ್ನೂರ, ಶಾಸಕ ಶರಣಗೌಡ ಕಂದಕೂರ, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ಮಾಜಿ ಶಾಸಕ ಗುರುಪಾಟೀಲ್ ಶಿರವಾಳ, ಅಮಾತೆಪ್ಪ ಕಂದಕೂರ, ಶರಣಪ್ಪ ಸಲಾದಪುರ,ನಿಖಿಲ್ ಶಂಕರ್,ಬಸವರಾಜ ವಿಭೂತಿಹಳ್ಳಿ, ಗಿರೆಪ್ಪಗೌಡ ಬಾಣತಿಹಾಳ, ಡಾ .ಭೀಮಣ್ಣ ಮೇಟಿ, ಶಾಂತಗೌಡ ನಾಗನಟಿಗಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

“ಮರಿಗೌಡ ಪಾಟೀಲ್ ಹುಲ್ಕಲ್ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ನನ್ನ ಒಡನಾಡಿ ಆಗಿದ್ದ ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ಭರಿಸಲಾಗದ ನಷ್ಟವಾಗಿದೆ. ಭಗವಂತ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ”

ಶರಣಬಸಪ್ಪಗೌಡ ದರ್ಶನಾಪುರ
ಜಿಲ್ಲಾ ಉಸ್ತುವಾರಿ ಸಚಿವರು.

About The Author