ಮಾನವೀಯ ಸಂವೇದನೆಯ ಪತ್ರಕರ್ತ ವೆಂಕಟೇಶ ಮಾನು – ನಾರಾಯಣಾಚಾರ್ಯ ಸಗರ

ಶಹಾಪುರ: ಪ್ರಾಮಾಣಕತೆ ಹಾಗೂ ವೃತ್ತಿಬದ್ದತೆಯಿಂದ ಪತ್ರಿಕಾ ರಂಗದಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ ಮಾನು ಅವರು ಸರಳ ಸಜ್ಜನಿಕೆಯ ಪ್ರೀತಿಯ ಅಂತಃಕರಣದ ಮಾನವೀಯ ಸಂವೇದನೆಯ ಪತ್ರಕರ್ತರಾಗಿದ್ದರು. ಅವರ ಬರಹಗಳ ಅಧ್ಯಯಶೀಲತೆ, ಗಾಂಭೀರ್ಯತೆ, ನಿಷ್ಟುರತೆ ನಮಗೆ ಬೆರಗುವನ್ನುಂಟು ಮಾಡುತ್ತಿತ್ತು ಎಂದು ಹಿರಿಯ ಪತ್ರಕರ್ತ ನಾರಾಯಣಾಚಾರ್ಯ ಸಗರ ಅಭಿಪ್ರಾಯಪಟ್ಟರು.
       ನಗರದ ಮಾತೃಛಾಯ ಶಾಲೆಯ ಸಭಾಂಗಣದಲ್ಲಿ ಶಹಾಪುರ ತಾಲೂಕ ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ಹಮ್ಮಿಕೊಂಡ ತೀವ್ರ ಹೃದಯಘಾತದಿಂದ ನಿಧನ ಹೊಂದಿದ ಹಿರಿಯ ಪತ್ರಕರ್ತ ವೆಂಕಟೇಶ ಮಾನು ಹಾಗೂ ಇತ್ತೀಚಿಗೆ ನಿಧನರಾದ ಪತ್ರಕರ್ತ ಶಿವಶರಣ ಕಟ್ಟಿಮನಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು ಬಹುಮುಖ ಪ್ರತಿಭೆಯ ಗಟ್ಟಿ ಬರಹಗಾರರಾಗಿದ್ದ ವೆಂಕಟೇಶ ಮಾನು ಅವರ ನಿಧನದಿಂದ ಸಗರನಾಡಿನ ಸಾಹಿತ್ಯ, ಸಾಂಸ್ಕೃತಿಕ ಲೋಕ ಮತ್ತು ಪತ್ರಿಕಾ ರಂಗ ಬಡವಾಗಿದೆ. ಚಿಂತನಾಶೀಲ, ತೀಕ್ಷ್ಣ ಬರಹಗಳಿಂದ ನಾಡಿನ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ತಮ್ಮ ಒಡನಾಟದ ಅನುಭವಗಳನ್ನು ನುಡಿನಮನ ಸಲ್ಲಿಸಿದರು.
      ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತ ಸಂಘದ ಶಹಾಪುರ ತಾಲೂಕ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಮುದನೂರು ಅವರು ಸೂಕ್ಷ್ಮ ಸಂವೇದನೆಯ ಹಿರಿಯ ಪತ್ರಕರ್ತ ವೆಂಕಟೇಶ ಮಾನು ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಮತ್ತು ಬುಕ್‌ಬ್ರಹ್ಮ ಮುಂತಾದ ನಾಡಿನ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದ ಅವರು ಪತ್ರಿಕಾ ಕ್ಷೇತ್ರಕ್ಕೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ. ಅನೇಕ ಯುವ ಬರಹಗಾರರನ್ನು ತಿದ್ದಿ ತಿಡಿ ಪ್ರೋತ್ಸಾಹ ನೀಡಿ ಬೆಳೆಸಿದ್ದಾರೆ. ಅವರ ಸಾಹಿತ್ಯ, ವಿಮರ್ಶೆ, ಸಾಮಾಜಿಕ ಚಿಂತನೆಯ ಬರಹಗಳಲ್ಲಿ ಜನಸಾಮಾನ್ಯರ ಕಾಳಜಿ ಜೀವಪರ ಚಿಂತನೆ ಸಾಮಾಜಿಕ ಅವ್ಯವಸ್ಥೆ ಕಾಣಬಹುದಾಗಿದೆ. ಇತ್ತೀಚಿಗೆ ನಿಧನ ಹೊಂದಿದ್ದ ಪತ್ರಕರ್ತ ಶಿವಶರಣ ಕಟ್ಟಿಮನಿ ಅವರು ಸಗರನಾಡಿನ ಪತ್ರಿಕಾ ಕ್ಷೇತ್ರದಲ್ಲಿ ಸೇವಾ ಮನೋಭಾವನೆಯಿಂದ ಸೇವೆ ಸಲ್ಲಿಸಿ ಪತ್ರಿಕಾ ಕ್ಷೇತ್ರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಸಗರನಾಡು ಅಪರೂಪದ ಪ್ರತಿಭಾವಂತ ಪತ್ರಕರ್ತರನ್ನು ಕಳೆದುಕೊಂಡಿದ್ದು ಪತ್ರಿಕಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಭಾವುಕರಾಗಿ ನುಡಿದರು.
      ಪತ್ರಿಕೆಯೊಂದಿಗೆ ಮಾತನಾಡಿದ ಸಂಶೋಧಕ ಡಿ.ಎನ್.ಅಕ್ಕಿ ಅವರು ನನ್ನ ಬಹುಕಾಲದ ಒಡನಾಡಿ, ಹಿತಚಿಂತಕ, ಮಾತೃಹೃದಯಿ, ವಸ್ತುನಿಷ್ಟ ಪ್ರಾಮಾಣಿಕ ಪತ್ರಕರ್ತ ಸಜ್ಜನ ಸ್ನೇಹಿತನ ಅಗಲಿಕೆ ನನಗೆ ತುಂಬಾ ದುಃಖವನ್ನುಂಟು ಮಾಡಿದೆ. ಪತ್ರಿಕಾ ಹಾಗೂ ಸಾಹಿತ್ಯ ಚೇತನ ವೆಂಕಟೇಶ ಮಾನು ಅವರ ಆತ್ಮಕ್ಕೆ ಚಿರಶಾಂತಿ ಕೋರುವೆ ಎಂದು ನುಡಿದರು.
     ಉಪನ್ಯಾಸಕ ರಾಘವೇಂದ್ರ ಹಾರಣಗೇರಾ ಅವರು ನಿಧನರಾದ ಹಿರಿಯ ಪತ್ರಕರ್ತರಾದ ವೆಂಕಟೇಶ ಮಾನು ಮತ್ತು ಪತ್ರಕರ್ತ ಶಿವಶರಣ ಕಟ್ಟಿಮನಿ ಅವರ ಬದುಕು ಮತ್ತು ವ್ಯಕ್ತಿತ್ವ ಸಾಧನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಪ್ರಹ್ಲಾದ ತಿಳುಗೊಳ, ಈರಣ್ಣ ಮೌರ್ಯ, ವಿಶಾಲ ಸಿಂದೆ, ಮಂಜುನಾಥ ಸಗರ, ಮಲ್ಲಿಕಾರ್ಜುನ, ಬಸವರಾಜ ಕರೆಗಾರ, ಮಾತೃಛಾಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ತಿಪ್ಪಣ್ಣ ಕ್ಯಾತನಾಳ, ಅಶೋಕ ಘನತೆ, ತಿಪ್ಪಣ ಶಹಾಪುರ ಮುಂತಾದವರು ಅಗಲಿದ ಹಿರಿಯ ಪತ್ರಕರ್ತರಿಗೆ ನುಡಿ ನಮನ ಸಲ್ಲಿಸಿದರು.

About The Author