ರಾಯಚೂರು ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಒದಗಿಸುವಂತೆ ಮತ್ತೊಮ್ಮೆ ಕೇಂದ್ರಕ್ಕೆ ಪತ್ರ ಬರೆದ ಸಿಎಂ : ಅಭಿನಂದನೆ ಸಲ್ಲಿಸಿದ ಅಯ್ಯಪ್ಪಗೌಡ ಗಬ್ಬೂರು

ರಾಯಚೂರು : ರಾಯಚೂರು ಜಿಲ್ಲೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಿಲ್ಲೆಯಾಗಿದೆ. ಭಾರತೀಯ ಸಂವಿಧಾನದ 371 (ಜೆ) ವಿಶೇಷ ನಿಬಂಧನೆಯ ಅಡಿಯಲ್ಲಿ ಒಳಗೊಂಡಿರುವುದರಿಂದ ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಮಂಜೂರು ಮಾಡಲು ರಾಯಚೂರು ಜಿಲ್ಲೆಯ ಹೆಸರನ್ನು ಮತ್ತೊಮ್ಮೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಮನಸುಖ ಮಾಂಡವೀಯ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದು, ರಾಯಚೂರು ಜಿಲ್ಲೆಯ ಜನತೆಗೆ ಶಕ್ತಿ ತುಂಬಿದಂತಾಗಿದೆ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಗಳು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಅಯ್ಯಪ್ಪಗೌಡ ಗಬ್ಬೂರು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಕಳೆದ ತಿಂಗಳು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ ಎಸ್ ಬೋಸರಾಜು, ಶರಣಪ್ರಕಾಶ ಪಾಟೀಲ್,ಶಾಸಕರು, ಸಂಸದರು, ಏಮ್ಸ್‌ ಹೋರಾಟ ಸಮಿತಿ ನೇತೃತ್ವದಲ್ಲಿನ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರದ ಮೂಲಕ ಮತ್ತೊಮ್ಮೆ
ಕೇಂದ್ರ ಸರ್ಕಾರದ ಸಚಿವರಿಗೆ ಮನವಿ ಮಾಡಿದ್ದಾರೆ.

ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಮೂಲಕ ಆರೋಗ್ಯ, ಉದ್ಯೋಗ, ವೈದ್ಯಕೀಯ ಶಿಕ್ಷಣದ ಬಲವರ್ಧನೆಗಾಗಿ ಹಾಗೂ ಹಿಂದುಳಿದ ಹಣೆಪಟ್ಟಿ ಕಳಚಲು ಮಂಜೂರು ಮಾಡಬೇಕಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ರಾಯಚೂರಿನಲ್ಲಿ ಏಮ್ಸ್‌ ಸ್ಥಾಪನೆಗೆ ಅನುಕೂಲಕರವಾದ ಎಲ್ಲಾ ಮೂಲ ಸಂಪನ್ಮೂಲಗಳಿರುವುದರಿಂದ ಆದಷ್ಟು ಬೇಗ ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದಾರೆ. ನುಡಿದಂತೆ ನಡೆದ ನಮ್ಮ ಸರಕಾರ ಏಮ್ಸ್ ಸ್ಥಾಪನೆ ಮಾಡಲು ಬದ್ಧವಾಗಿದೆ ಎಂದು ಅಯ್ಯಪ್ಪಗೌಡ ಗಬ್ಬೂರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *