ಆಸ್ತಿ ಆಸೆಗಾಗಿ ಹಾಲಿನಲ್ಲಿ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನು ಕೊಂದ ಮಲತಾಯಿ

Yadgiri ವಡಗೇರಾ : ತನಗೂ ತನ್ನ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕಡಿಮೆಯಾಗುತ್ತೆ ಎಂದು ಮಲತಾಯಿಯೊಬ್ಬಳು ಐದು ತಿಂಗಳ ಹಸುಗೂಸಿಗೆ ವಿಷ ಹಾಕಿ ಕೊಂದ ಘಟನೆ ವಡಗೇರಾ ತಾಲೂಕಿನ ಬಬಲಾದಿ ಗ್ರಾಮದಲ್ಲಿ ನಡೆದಿದೆ.

ವಡಗೇರಾ ತಾಲೂಕಿನ ಬಬಲಾದಿ ಗ್ರಾಮದಲ್ಲಿ ಸಿದ್ದಪ್ಪ ಶೆಟ್ಟಿಗೇರಿ ಎಂಬಾತ ಕಳೆದ 11 ವರ್ಷಗಳ ಹಿಂದೆ ಮೊದಲು ಶ್ರೀದೇವಿಯನ್ನು ಮದುವೆಯಾಗಿದ್ದ. ಮಕ್ಕಳಾಗದ ಕಾರಣ ಅವಳನ್ನು ಬಿಟ್ಟು ದೇವಮ್ಮ ಎಂಬಾಕಿಯನ್ನು ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ. ದೇವಮ್ಮಳನ್ನು ಮದುವೆಯಾದ.

ಶ್ರೀದೇವಿಯು ತನ್ನ ತವರು ಮನೆ ಚಾಮನಹಳ್ಳಿಯಲ್ಲಿ ವಾಸವಾಗಿದ್ದಳು. ಮೂರು ವರ್ಷಗಳ ಹಿಂದೆ ಹಿರಿಯರೆಲ್ಲ ಮಧ್ಯಪ್ರವೇಶಿಸಿ ರಾಜಿ ಸಂಧಾನ ಮಾಡಿದ್ದಾರೆ. ಇದಾದ ನಂತರ ಆಕೆ ಗಂಡನ ಮನೆ ಬಬಲಾದಿಗೆ ಬಂದಿದ್ದಾಳೆ. ಕಳೆದ ಐದು ತಿಂಗಳ ಹಿಂದೆ ಆಕೆಗೆ ಹೆಣ್ಣು ಮಗು ಜನಿಸಿದೆ. ಅದಾಗಲೇ ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಿದ್ದಾರೆ.

ಇದೀಗ ತನ್ನ ಸವತಿ ಶ್ರೀದೇವಿಗೆ ಮಗು ಜನಿಸಿದ್ದರಿಂದ ಅರ್ಧ ಆಸ್ತಿ ಅವಳಿಗೆ ಹೋಗಿ ತನಗೆ ಪಾಲು ಕಡಿಮೆ ಬರುತ್ತೆ ಎಂದು ತಿಳಿದು ಐದು ತಿಂಗಳು ಹಸುಗೂಸು ಸಂಗೀತಾಗೆ ಅವಳ ತಾಯಿ ಹಾಲುಣಿಸುವಾಗ ಆರೋಪಿ ದೇವಮ್ಮ ಮಗುವನ್ನು ಎತ್ತಿಕೊಂಡು ಒಂದು ರೂಮಿನೊಳಗೆ ಹೋಗಿ ಹಾಲಿನ ಬಾಟಲಿಯಲ್ಲಿ ವಿಷವನ್ನು ಬೆರಸಿ ಮಗುವಿಗೆ ಕುಡಿಸಿದ್ದಾಳೆ.ವಿಷ ಕುಡಿದ ಮಗು ಮೂರು ತಾಸಿನಲ್ಲಿ ಮೃತಪಟ್ಟಿದೆ. ಆರೋಪಿ ದೇವಮ್ಮಳ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು  ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

About The Author