ಸಾರ್ವಜನಿಕರಿಕದ ಬಂದ ಅರ್ಜಿಗಳಿಗೆ ಸ್ಪಂದಿಸಿ : ಡಿ ಸಿ ಸ್ನೇಹಲ್

ಶಹಾಪುರ : ತಾಲೂಕು ಕಚೇರಿ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಗಳು ಯಾವುದೇ ಕಾರಣಕ್ಕೂ ರೈತರ, ಬಡವರ ಅರ್ಜಿಗಳ ವಿಲೇವಾರಿ ಮಾಡುವಲ್ಲಿ ನಿರ್ಲಕ್ಷ್ಯ ತೊರಬಾರದು. ಒಂದು ವೇಳೆ ತೊರಿದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಎಚ್ಚರಿಕೆ ನೀಡಿದರು.

ತಾಲೂಕು ಕಚೇರಿಗೆ ಬುಧವಾರ ಭೇಟಿ  ನೀಡಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿದ ನಂತರ ಸಾರ್ವಜನಿಕರಿಂದ  ಖುದ್ದು ಅರ್ಜಿ ಪಡೆದು, ವಿವರವಾಗಿ ಮಾಹಿತಿ ಪಡೆದು ಪರಿಹಾರ ತಿಳಿಸಿದರು.

ಜ್ವಲಂತ ಸಮಸ್ಯೆಗೆ ಪರಿಹಾರ ನೀಡುವರಾ ಡಿಸಿ?

ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ದಲಿತರಿಗೆ ಸ್ಮಶಾನ ಭೂಮಿ ಇಲ್ಲದೇ ಇರುವುದರಿಂದ ತುಂಬಾ ತೊಂದರೆ ಅನುಭವಿಸುವಂಥ ಸ್ಥಿತಿ ಇದೆ. ದಲಿತರ ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಅವರ ಶವ ಸಂಸ್ಕಾರದ್ದೆ ದೊಡ್ಡ ಚಿಂತೆಯಾಗಿದೆ. ದಲಿತ ಸಮುದಾಯಕ್ಕೆ ಸ್ಮಶಾನ ಭೂಮಿ ಮಂಜೂರಾತಿ ನೀಡುವಂತೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರು ಯಾವುದೇ ಪ್ರಯೋಜನವಾಗಿಲ್ಲ. ದಲಿತರ ಮನೆಯಲ್ಲಿ ಯಾರಾದರೂ ಸತ್ತರೆ ಅವರ ಹೆಣವನ್ನು ಮನೆಯಲ್ಲಿ ಹೂಳುವ ಸ್ಥಿತಿಗೆ ಎಂದು ಜಿಲ್ಲಾಧಿಕಾರಿಗಳ ಮುಂದೆ ಗ್ರಾಮದ ದಲಿತ ಮುಖಂಡ ನಿಂಗಣ್ಣ ನಾಟೇಕರ್ ಮನವಿ ಮಾಡಿದರು.

ಅಲ್ಲದೆ ತಾಲೂಕಿನ ದರಿಯಾಪೂರ್ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಶಿಥಿಲಗೊಂಡಿದ್ದು ಭಯದ ವಾತಾವರಣದಲ್ಲಿ ಮಕ್ಕಳು ಕಲಿಯುವಂತೆ ಆಗಿದೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಬೇಕು. ಪ್ರತಿಯೊಬ್ಬರ ಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ಸರ್ಕಾರದ ಮಹತ್ವಪೂರ್ಣ ಯೋಜನೆಯಾದ ಜೆಜೆ ಎಂ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು ನಲ್ಲಿಯಲ್ಲಿ ನೀರು ಬರುವ ಮೊದಲೇ ಪೈಪುಗಳು ಒಡೆದು ಹೋಗಿವೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡ ಮಾನಪ್ಪ ಧೋರಿ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿ ಗ್ರಾಮದ ಸಮಸ್ಯೆಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ನಗರದಲ್ಲಿ ಪಡಿತರ ಅಕ್ಕಿ ಸಮೇತ ಲಾರಿ ಕಳ್ಳತನ ಪ್ರಕರಣದಿಂದ ಅಧಿಕಾರಿಗಳ ಕೈವಾಡವಿದೆ, ತಕ್ಷಣ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು.
ಪ್ರಮುಖ ದೂರು ಗಳು ಸೇರಿದಂತೆ ರೇಷನ್ ಕಾರ್ಡ್, ಸೇರಿದಂತೆ ಸಾರ್ವಜನಿಕರಿಂದ ಅರ್ಜಿ ಸಲ್ಲಿಕೆ ಯಾದವು.

ಮುಂಗಾರು ಹಂಗಾಗಿ ಬೀಜ ಗೊಬ್ಬರ ಕೊರತೆ ಇಲ್ಲ ಡಿಸಿ.

 ಈ ವರ್ಷ ಮುಂಗಾರು ಹಂಗಾಮಿಗೆ ರೈತರಿಗೆ ಬೇಕಾದ ಅಗತ್ಯ ಬೀಜ ಗೊಬ್ಬರಗಳ ದಾಸ್ತಾನು ಇದೆ. ಈ ಸಲ ಬೀಜ ಗೊಬ್ಬರ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.

ತಾಲೂಕ ಕಚೇರಿಗೆ ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ, ತಹಸಿಲ್ದಾರ್ ವುಮಾಕಾಂತ್ ಹಳ್ಳೆ, ನಗರಸಭೆ ಪೌರಾಯುಕ್ತ ರಮೇಶ್ ಬಡಿಗೇರ್, ಕ್ಷೇತ್ರ ಶಿಕ್ಷಣಾಧಿಕಾರಿ ಶೀಬಾಜಲಿಯನ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ತಾಲೂಕು ಪಂಚಾಯಿತಿ ಅಧಿಕಾರಿ ಭೀಮರಾಯ ಬಿರಾದಾರ್, ತಾಲೂಕ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸೂರ್ಯವಂಶಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *