ಕೈಲಾಸ ಕ್ಷೇತ್ರ ಮಹಾತ್ಮೆ : ಬಸವರಾಜ ಭೋಗಾವತಿ ಅವರ ಅನನ್ಯ ನಿಷ್ಠೆ; : ಗೆದ್ದರು ಎಂ.ಬಿ.ಸಿದ್ರಾಮಯ್ಯ ಸ್ವಾಮಿ–ಮುಕ್ಕಣ್ಣ ಕರಿಗಾರ

ಮಾನ್ವಿಯ ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲರು,ಪತ್ರಕರ್ತರೂ ಮಾನ್ವಿಯ ಸಾಹಿತ್ಯ ಶಕ್ತಿಯಾಗಿರುವ ಬಸವರಾಜ ಭೋಗಾವತಿಯವರು ನನ್ನ ಆತ್ಮೀಯ ಬಳಗದಲ್ಲೊಬ್ಬರು,ಮಹಾಶೈವ ಧರ್ಮಪೀಠದಲ್ಲಿ ಅತ್ಯಂತ ನಿಷ್ಠಾವಂತ ಭಕ್ತರಲ್ಲೊಬ್ಬರು.ಮಹಾಶೈವ ಧರ್ಮಪೀಠದ ಎಲ್ಲ ಕೆಲಸ,ಕಾರ್ಯ,ಕಾರ್ಯಕ್ರಮ- ಚಟುವಟಿಕೆಗಳಲ್ಲಿ ಮುಕ್ತಮನಸ್ಸಿನಿಂದ ಪಾಲ್ಗೊಳ್ಳುತ್ತಾರೆ,ತಮ್ಮ ಬಂಧು- ಮಿತ್ರರು,ಪರಿಚಿತರ ಹಿತಬಯಸಿ ಅವರನ್ನು ಶ್ರೀಕ್ಷೇತ್ರ ಕೈಲಾಸಕ್ಕೆ ಕರೆತಂದು ವಿಶ್ವೇಶ್ವರ ಶಿವ,ವಿಶ್ವೇಶ್ವರಿ ದುರ್ಗಾದೇವಿಯರ ಆಶೀರ್ವಾದ ಮಾಡಿಸುತ್ತಾರೆ.ಮಾನ್ವಿಯ ಹಾಲಿ ಶಾಸಕರಾಗಿರುವ ಶ್ರೀ ರಾಜಾ ವೆಂಕಟಪ್ಪ ನಾಯಕ್ ಅವರ ಗೆಲುವಿಗಾಗಿ ಪ್ರಾರ್ಥಿಸಿ ನಮ್ಮ ಮಠಕ್ಕೆ ಬಂದಿದ್ದರು,ರಾಜಾವೆಂಕಟಪ್ಪ ನಾಯಕ್ ಅವರ ನಿಜ ಹಿತೈಷಿಗಳಾಗಿ ಅವರು ಗೆಲ್ಲಲೇಬೇಕು ಎಂಬ ಸ್ನೇಹಿತನ ಹಠವೂ ಅವರದಾಗಿತ್ತು.ತಾಯಿ ವಿಶ್ವೇಶ್ವರಿ ದುರ್ಗಾದೇವಿಯಲ್ಲಿ ರಾಜಾ ವೆಂಕಟಪ್ಪ ನಾಯಕ್ ಅವರ ಗೆಲುವಿಗೆ ಪ್ರಾರ್ಥಿಸಿ ತಾಯಿಯ ಆಶೀರ್ವಾದ ಪಡೆದು ‘ ಗೆಲ್ಲುತ್ತಾರೆ ಹೋಗಿ’ ಎಂದು ಆಶೀರ್ವದಿಸಿ ಕಳಿಸಿದ್ದೆ.ನನ್ನ ಮಾತಿನಂತೆ ರಾಜಾ ವೆಂಕಟಪ್ಪ ನಾಯಕ್ ಅವರು ಗೆದ್ದು ಮಾನ್ವಿಯ ಶಾಸಕರಾದರು.ಅಂದಿನಿಂದ ಬಸವರಾಜ ಭೋಗಾವತಿಯವರಿಗೆ ನನ್ನಲ್ಲಿ ಅಚಲವಿಶ್ವಾಸ ಉಂಟಾಗಿ ಮಾನ್ವಿಯ ಯಾವುದೇ ಚುನಾವಣೆ,ಯಾರದೆ ಸಮಸ್ಯೆ ಇದ್ದರೂ ಮಹಾಶೈವ ಧರ್ಮಪೀಠಕ್ಕೆ ಕರೆದುಕೊಂಡು ಬರುತ್ತಾರೆ.ತಾಯಿ ದುರ್ಗಾದೇವಿಯ ಸನ್ನಿಧಿಯಲ್ಲಿ ಹೇಳಿದ್ದು ನಡೆದಿದೆ, ಗೆಲ್ಲುತ್ತಾರೆ ಎಂದವರು ಗೆದ್ದಿದ್ದಾರೆ; ಸೋಲುತ್ತಾರೆ ಎಂದವರು ಸೋತಿದ್ದಾರೆ.ಆ ಕಾರಣದಿಂದ ಮಠ ಪೀಠಗಳತ್ತ ಹೋಗದ ಬಸವರಾಜ ಭೋಗಾವತಿ ಅವರು ಮಹಾಶೈವ ಧರ್ಮಪೀಠವನ್ನು ‘ ನಂಬಿದವರನ್ನು ಉದ್ಧರಿಸುವ ನಿಜ ಕೈಲಾಸ’ ಎಂದು ನಂಬಿ,ನಡೆಯುತ್ತಿದ್ದಾರೆ.ಅವರನ್ನು,ಅವರ ಬಂಧು- ಮಿತ್ರರನ್ನು ಮುನ್ನಡೆಸುತ್ತಿದ್ದಾರೆ ಶ್ರೀಕ್ಷೇತ್ರ ಕೈಲಾಸದ ಅಧಿದೈವರುಗಳಾದ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರು.

ಜೂನ್ ಹನ್ನೆರಡರ ಭಾನುವಾರದಂದು ನಾನು ‘ಶಿವೋಪಶಮನ’ ಕಾರ್ಯದಲ್ಲಿದ್ದಾಗ ಬಸವರಾಜ ಭೋಗಾವತಿಯವರು ಅವರ ಸ್ನೇಹಿತರಾದ ಮಾನ್ವಿಯ ಪತ್ರಕರ್ತರಲ್ಲೊಬ್ಬರಾದ ಎಂ ಬಿ ಸಿದ್ರಾಮಯ್ಯ ಸ್ವಾಮಿಯವರು ಹಾಗೂ ಮತ್ತಿತರರನ್ನು ಕರೆದುಕೊಂಡು ಬಂದಿದ್ದರು.ಎಂ ಬಿ ಸಿದ್ರಾಮಯ್ಯಸ್ವಾಮಿಯವರನ್ನು ಮಾನ್ವಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರನ್ನಾಗಿ ಮಾಡುವ ಅಪೇಕ್ಷೆ ಭೋಗಾವತಿಯವರದು.ಭೋಗಾವತಿಯಲ್ಲಿ ನಂಬಿಕೆ ಇಟ್ಟವರು ಎಂ ಬಿ ಸಿದ್ರಾಮಯ್ಯನವರು.

ಬಸವರಾಜ ಭೋಗಾವತಿಯವರ ನಿಷ್ಠೆ,ಭಕ್ತಿ- ಶ್ರದ್ಧೆಗಳ ಕಾರಣದಿಂದ ಅವರು ಯಾವಾಗಲೇ ಬರಲಿ,ಯಾರನ್ನೇ ಕರೆತರಲಿ ಅಥವಾ ಯಾರ ಹಿತವನ್ನಾದರೂ ಬಯಸಿ ಬರಲಿ ಅದನ್ನು ನಡೆಸಿಕೊಡುತ್ತಾಳೆ ಜಯದುರ್ಗೆಯಾಗಿ ಲೀಲೆ ಮೆರೆಯುತ್ತಿರುವ ತಾಯಿ ವಿಶ್ವೇಶ್ವರಿ ದುರ್ಗಾದೇವಿ.ಬಸವರಾಜ ಭೋಗಾವತಿಯವರಲ್ಲಿ ಸ್ವಲ್ಪ ಅಳುಕು,ಆತಂಕ ಇತ್ತು ಕೆಲವರು ವಿರೋಧ ಒಡ್ಡುತ್ತಿರುವುದರಿಂದ ಎಂ ಬಿ ಸಿದ್ರಾಮಯ್ಯಸ್ವಾಮಿಯವರು ಗೆಲ್ಲುವ ಬಗ್ಗೆ.ಎಂ ಬಿ ಸಿದ್ರಾಮಯ್ಯ ಸ್ವಾಮಿಯವರಿಗೆ ವಯಸ್ಸಾಗಿದೆ,ಒಂದು ಬಾರಿ ಕಾರ್ಯನಿರತ ಪತ್ರಕರ್ತರ ತಾಲೂಕಾ ಅಧ್ಯಕ್ಷರರಾಗಬೇಕು ಎನ್ನುವ ಹಂಬಲ ಅವರದು.ಹೊಸತಲೆಮಾರಿನ ಯುವ ಪತ್ರಕರ್ತರುಗಳಿಗೆ ಸ್ಪರ್ಧೆಯೊಡ್ಡುವ ಸಹಜ ಸ್ಪರ್ಧಾಕಾಂಕ್ಷೆ.ಎಂ ಬಿ ಸಿದ್ರಾಮಯ್ಯ ಸ್ವಾಮಿಯವರು ಆತ್ಮೀಯರು ಆಗಿದ್ದರಿಂದ ಹೇಗಾದರೂ ಗೆಲ್ಲಲೇಬೇಕು,’ ಗೆಲ್ಲಿಸಿ ಗುರುದೇವ’ ಎನ್ನುವ ಆಗ್ರಹ ಬಸವರಾಜ ಭೋಗಾವತಿಯವರದು.’ಆಗಲಿ’ ಎಂದು ತಾಯಿ ವಿಶ್ವೇಶ್ವರಿ ದುರ್ಗಾದೇವಿಯನ್ನು ಪ್ರಾರ್ಥಿಸಿ’ ಗೆಲ್ಲುತ್ತೀರಿ ಸ್ವಾಮಿಯವರೆ’ ಎಂದು ಆಶೀರ್ವದಿಸಿ ತಾಯಿಯ ಸನ್ನಿಧಿಯಲ್ಲೇ ಯಶಸ್ಸನ್ನು ಹಾರೈಸಿ,ಶಾಲು ಹೊದಿಸಿ, ಸನ್ಮಾನಿಸಿ ಕಳಿಸಿದ್ದೆ.’ ಅಡ್ಡಿ ಆತಂಕಗಳು ಎದುರಾದರೂ ಭಯಪಡಬೇಡಿ,ಗೆಲುವು ನಿಮ್ಮದೆ’ ಎಂದು ಬಸವರಾಜ ಭೋಗಾವತಿಯವರಿಗೆ ಭರವಸೆ ನೀಡಿ,ಕಳುಹಿಸಿದ್ದೆ.ನಾನು ಹೇಳಿದಂತೆ ಕೆಲವು ಆರಂಭಿಕ ಅಡೆತಡೆಗಳಾದರೂ ಎಂ ಬಿ ಸಿದ್ರಾಮಯ್ಯ ಸ್ವಾಮಿ ಮತ್ತು ಬಸವರಾಜ ಭೋಗಾವತಿಯವರಿಗೆ ಮಹಾಶೈವ ಧರ್ಮಪೀಠದ ಬಗ್ಗೆ ಅನನ್ಯವಿಶ್ವಾಸ ಇದ್ದುದರಿಂದ ಅಡ್ಡಿ- ಆತಂಕಗಳನ್ನು ಲೆಕ್ಕಿಸದೆ ಮುನ್ನಡೆದರು.ಫಲವಾಗಿ ಇಂದು ನಡೆದ ಮಾನ್ವಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಂ ಬಿ ಸಿದ್ರಾಮಯ್ಯಸ್ವಾಮಿಯವರು ಅವಿರೋಧವಾಗಿ ಆಯ್ಕೆಯಾದದ್ದಲ್ಲದೆ ಬಸವರಾಜ ಭೋಗಾವತಿ ಅವರ ತಂಡದ ಮಾರೆಪ್ಪ ದೊಡ್ಡಮನಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ.

ಈ ಸಂಜೆ 6.00 ಘಂಟೆಗೆ ನಾನು ಗಬ್ಬೂರಿನಿಂದ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದೆ.ನನ್ನ ಮೊಬೈಲ್ ಅನ್ನು ಅಪ್ ಡೇಟ್ ಮಾಡುತ್ತಿದ್ದರಿಂದ ಅರ್ಧಘಂಟೆ ವಾಟ್ಸಾಪ್ ಮೆಸೇಜ್ ಗಳನ್ನು ನೋಡಲು ಆಗಿರಲಿಲ್ಲ.ರಾಯಚೂರಿನಲ್ಲಿ ಕಾರಿಗೆ ಇಂಧನ ತುಂಬಿಸುವ ಸಮಯ,ಅಪ್ ಡೇಟ್ ಆದ ಮೊಬೈಲ್ ನಲ್ಲಿದ್ದ ಬಸವರಾಜ ಭೋಗಾವತಿ ಅವರ ಮೆಸೇಜ್ ;

“ಸರ್ ನಮಸ್ಕಾರ, ನಿಮ್ಮ ಆಶೀರ್ವಾದ,ಎಂ ಬಿ ಸಿದ್ರಾಮಯ್ಯ ಸ್ವಾಮಿ ಮಾನ್ವಿ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿಯಾಗಿ ನಮ್ಮ ತಂಡದ ಮಾರೆಪ್ಪ ದೊಡ್ಡಮನಿ ಚುನಾವಣೆಯ ಮೂಲಕ ಗೆಲುವು ಸಾಧಿಸಿದ್ದಾರೆ”.

ಮೆಸೇಜ್ ನೋಡಿ ಹರ್ಷಿತನಾದ ನಾನು ಬಸವರಾಜ ಭೋಗಾವತಿ ಅವರಿಗೆ ಕರೆಮಾಡಿ,ಅವರ ಪರಿಶ್ರಮ ಫಲ ನೀಡಿದ್ದಕ್ಕೆ ಅವರಿಗೆ ಮತ್ತು ಅವಿರೋಧವಾಗಿ ಆಯ್ಕೆಯಾದ ಎಂ ಬಿ ಸಿದ್ರಾಮಯ್ಯಸ್ವಾಮಿಯವರಿಗೆ ಮತ್ತು ಮಾರೆಪ್ಪ ದೊಡ್ಡಮನಿ ಅವರಿಗೆ ಅಭಿನಂದನೆಗಳನ್ನು ತಿಳಿಸಿದೆ.

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದ ಅಸಂಖ್ಯಾತ ಲೀಲೆಗಳಲ್ಲಿ ಇದು ಒಂದಷ್ಟೆ.ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜಗದೋದ್ಧಾರದ ಲೀಲೆ ನಟಿಸುತ್ತಿರುವ ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾದೇವಿಯರು ತಮ್ಮನ್ನು ನಂಬಿ ಬರುವ ಭಕ್ತರ ಅಭೀಷ್ಟಗಳನ್ನು ಈಡೇರಿಸುವ ಮೂಲಕ ಲೋಕಕಲ್ಯಾಣ ಸಾಧಿಸುತ್ತಿದ್ದಾರೆ.ಭಕ್ತರ ಸಂಕಷ್ಟಗಳನ್ನು ಪರಿಹರಿಸಿ,ಅವರ ಮನೋಕಾಮನೆಗಳನ್ನು ಪೂರೈಸುತ್ತಿರುವ ವಿಶ್ವೇಶ್ವರ ಶಿವನು ‘ ಮಾತನಾಡುವ ಮಹಾದೇವ’ ಎಂದು ಪ್ರಸಿದ್ಧನಾಗಿದ್ದರೆ ಯಶವನ್ನುಬೇಡಿ ಬಂದವರಿಗೆ ಗೆಲುವಿನ ಅಭಯವನ್ನಿತ್ತು ಹರಸುವ ಮೂಲಕ ವಿಶ್ವೇಶ್ವರಿ ದುರ್ಗಾದೇವಿಯು ‘ ಜಯದುರ್ಗೆ’ ಯ ಲೀಲೆ ಮೆರೆಯುತ್ತಿದ್ದಾಳೆ.

About The Author