ರಾಯಚೂರು (ಗಬ್ಬೂರು ಜುಲೈ 12),,
ಬೂಕರ್ ಪ್ರಶಸ್ತಿ ಪುರಸ್ಕೃತರಾದ ಕನ್ನಡ ಲೇಖಕಿ,ಕಥೆಗಾರರಾದ ಬಾನು ಮುಷ್ತಾಕ್ ಅವರು ಮಹಾಶೈವ ಧರ್ಮಪೀಠದ 2025 ನೇ ಸಾಲಿನ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಗಬ್ಬೂರಿನ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಅಧ್ಯಕ್ಷತೆಯಲ್ಲಿ ಜುಲೈ 12 ರಂದು ನಡೆದ ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯು 2025 ನೇ ವರ್ಷದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯರತ್ನ ಪ್ರಶಸ್ತಿಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿತು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠವು ಪ್ರತಿವರ್ಷ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಗುರುಗಳಾದ ಧಾರವಾಡದ ತಪೋವನದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಜನ್ಮದಿನೋತ್ಸವವಾದ ನೂಲಹುಣ್ಣಿಮೆಯ ದಿನದಂದು ‘ ಮಹಾಶೈವ ಗುರುಪೂರ್ಣಿಮೆ’ ಯನ್ನು ಆಚರಿಸಿ,ಸಾಹಿತ್ಯ,ಪತ್ರಿಕಾಕ್ಷೇತ್ರ ಮತ್ತು ಸಮಾಜಸೇವಾಕ್ಷೇತ್ರಗಳಲ್ಲಿ ಗಮನಾರ್ಹ ಸೇವೆಸಲ್ಲಿಸಿದ ವ್ಯಕ್ತಿಗಳನ್ನು ಗುರುತಿಸಿ ,ರಾಜ್ಯ ಮಟ್ಟದ ಪ್ರಶಸ್ತಿ ನೀಡಿ,ಗೌರವಿಸುತ್ತಿದೆ.ಕನ್ನಡದ ಹಿರಿಯ ಕವಿ ಸಾಹಿತಿಗಳಾದ ಜಿ.ಎಸ್.ಶಿವರುದ್ರಪ್ಪ,ಬಿ.ಎ.ಸನದಿ,ಲಕ್ಷ್ಮೀನಾರಾಯಣ ಭಟ್,ಚಂದ್ರಶೇಖರ ಕಂಬಾರ,ಶಾಶ್ವತಸ್ವಾಮಿ ಮುಕ್ಕುಂದಿಮಠ, ಎಚ್ ಎಸ್ ಶಿವಪ್ರಕಾಶ,ಸಿದ್ಧರಾಮ ಹೊನ್ಕಲ್ ಅವರುಗಳು ಇದುವರೆಗೆ ಮಹಾಶೈವ ಧರ್ಮಪೀಠದ ಸಾಹಿತ್ಯಕ ಪ್ರಶಸ್ತಿಯನ್ನು ಪಡೆದ ಕನ್ನಡದ ಹಿರಿಯರಾಗಿದ್ದಾರೆ.ಪ್ರಸಕ್ತ ಸಾಲಿನ ‘ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿ’ ಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ.ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿಯು ಒಂದು ಲಕ್ಷರೂಪಾಯಿ ನಗದು,ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
ಅಗಸ್ಟ್ 09 ನೇ ತಾರೀಖಿನಂದು ಮಹಾಶೈವ ಧರ್ಮಪೀಠದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಭಾಭವನದಲ್ಲಿ ನಡೆಯುವ ‘ ಮಹಾಶೈವ ಗುರುಪೂರ್ಣಿಮೆ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಪ್ರಶಸ್ತಿ ನೀಡಿ,ಗೌರವಿಸಲಾಗುತ್ತದೆ .
ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿ ಪುರಸ್ಕೃತರ ಆಯ್ಕೆಯ ಇಂದಿನ ಸಭೆಯಲ್ಲಿ ಮಹಾಶೈವ ಧರ್ಮಪೀಠ ಆಡಳಿತಾಧಿಕಾರಿ ತ್ರಯಂಬಕೇಶ ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿಯವರಾದ ಬಸವರಾಜ ಸಿನ್ನೂರು,ವಾರ್ತಾಧಿಕಾರಿ ಬಸವರಾಜ ಕರೆಗಾರ ಸದಸ್ಯರುಗಳಾದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಷಣ್ಮುಖ ಹೂಗಾರ,ಪ್ರಕಾಶ ಪಾಟೀಲ್ ಶಾವಂತಗೇರಾ,ಮೃತ್ಯುಂಜಯ ಯಾದವ ಪಾಲ್ಗೊಂಡಿದ್ದರು ಎಂದು ಮಹಾಶೈವ ಧರ್ಮಪೀಠ ಪತ್ರಿಕಾ ಪ್ರಕಟಣೆ ತಿಳಿಸಿದೆ.