ಗ್ರಾಮ ಪಂಚಾಯತ ವೈಫಲ್ಯ : ಕುರಿಹಾಳ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ

ಬಸವರಾಜ ಕರೇಗಾರ 

ಶಹಾಪೂರ,

ವಡಗೇರಾ ತಾಲೂಕಿನ ಕೊಂಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕುರಿಹಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು ಗ್ರಾಮ ಪಂಚಾಯಿತಿಯ ವೈಫಲ್ಯ ಮತ್ತು ಪಿಡಿಓ ನಿರ್ಲಕ್ಷವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ. ಕುಡಿಯುವ ನೀರಿಗಾಗಿ ಖಾಸಗಿ ಬೋರ್ವೆಲ್ ಗಳನ್ನು ಅವಲಂಬಿಸಬೇಕಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಗ್ರಾಮದಲ್ಲಿ ಇಲ್ಲ. ಸರ್ಕಾರ ಮತ್ತು ಮೇಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಿದರೂ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ದಿನೇ ದಿನೇ ನೀರಿನ ಸಮಸ್ಯೆ ತಾಲೂಕಿನಾದ್ಯಂತ ಒಬ್ಬವಿಸಿದ್ದು ಶಾಸಕರು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯಿತಿಯ ವೈಫಲ್ಯ. 

ಜನಪ್ರತಿನಿಧಿಗಳ ಅಧಿಕಾರವಿಲ್ಲದ ಗ್ರಾಮ ಪಂಚಾಯಿತಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಿಡಿಒ ಅವರ ಪೋನ್ ಸ್ವಿಚ್ ಆಫ್ ಎಂದು ಬರುತ್ತಿದೆ.ಪಟ್ಟಣದಲ್ಲಿ ವಾಸವಾಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮೀಣ ಸಮಸ್ಯೆ ಅರ್ಥವಾಗುವುದಿಲ್ಲ. ಗ್ರಾಮದಲ್ಲಿನ ಬಾವಿಗಳು ಕಸ ಕಡ್ಡಿಯಿಂದ ಕೂಡಿದ್ದು ಬಾವಿಗಳ ನೀರು ಬಳಸುವುದಕ್ಕೂ ಯೋಗ್ಯವಿಲ್ಲ.

 

ಕುರಿಹಾಳ ಗ್ರಾಮದ ಜನರು ನೀರಿಗಾಗಿ ಪರದಾಡುತ್ತಿದ್ದು ಸುಮಾರು 2 km ದೂರದ ಖಾಸಗಿ ವ್ಯಕ್ತಿಗಳ ಬೋರ್ವೆಲ್ನಿಂದ ನೀರು ತರುತ್ತಿದ್ದಾರೆ ಬಳಕೆ ನೀರು ಸಿಗುತ್ತಿಲ್ಲ ಜಲಜೀವನ್ ಮಿಷನ್ ನಲ್ಲಿಗಳು ಇದ್ದರೂ ಅದರಲ್ಲಿ ನೀರು ಬರುತ್ತಿಲ್ಲ ನೀರಿನ ಸಮಸ್ಯೆ ಇದೇ ರೀತಿ ಮುಂದುವರೆದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು.

ಮಂಜುನಾಥ ರೆಡ್ಡಿ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ.ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ 

***********************

ರವಿವಾರದಂದು ಕುರಿಹಾಳ ಗ್ರಾಮಕ್ಕೆ ಸಾರ್ವಜನಿಕರು ಕುಡಿಯುವ ನೀರಿನ ಸಲುವಾಗಿ ನನಗೆ ಕರೆ ಮಾಡಿದ ನಿಮಿತ್ತ ಗ್ರಾಮಕ್ಕೆ ಭೇಟಿ ನೀಡಿ ಕೆಟ್ಟಿರುವ ಬೋರ್ವೆಲನ್ನು ರಿಪೇರಿ ಮಾಡಿಸಿ ನೀರು ಒದಗಿಸಿಕೊಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸೋಮವಾರ ಕುಡಿವ ನೀರಿನ ಸಮಸ್ಯೆ ಪರಿಹಾರವಾಗುತ್ತದೆ.

ಶಶೀಧರ ಹಿರೇಮಠ 
ತಾಪಂ.ಕಾರ್ಯನಿರ್ವಹಣಾಧಿಕಾರಿ ವಡಗೇರಾ