Blog

ರಾಯಚೂರು ಡಿಸಿಸಿ ಬ್ಯಾಂಕ್ ನೇಮಕಾತಿ : ರೋಸ್ಟರ್ ಬಿಂದು ಉಲ್ಲಂಘನೆ : ಸಂದರ್ಶನ ರದ್ದುಗೊಳಿಸುವಂತೆ ದಸಂಸ ಮನವಿ

ಶಹಾಪುರ,

ಮೇ 12 ರಿಂದ 17 ರವರೆಗೆ ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕನ ವಿವಿಧ ವೃಂದಗಳ ಹುದ್ದೆ ಭರ್ತಿಗಾಗಿ ನಡೆಯುತ್ತಿರುವ ಸಂದರ್ಶನ ಮುಂದೂಡಬೇಕು ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರು ಆಗ್ರಹಿಸಿದ್ದಾರೆ. ರಾಯಚೂರು ಜಿಲ್ಲಾಧಿಕಾರಿ ಮತ್ತು ರಾಯಚೂರು ಆರ್ಡಿಸಿಸಿ ಬ್ಯಾಂಕ್ ನೇಮಕಾತಿ ಪ್ರಾಧಿಕಾರಕ್ಕೆ ಮನವಿ ಪತ್ರ ಸಲ್ಲಿಸಿದ ಅವರು ಶಾಖಾ ವ್ಯವಸ್ಥಾಪಕರು,ಸಹಾಯಕ ಮತ್ತು ಅಟೆಂಡರ್ ಹುದ್ದೆಗಳಿಗೆ ಅರ್ಜಿಗಳನ್ನು ಕರೆದಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳು‌ಮುಗಿದಿವೆ.

ಸರ್ಕಾರ ಆದೇಶದಂತೆ 1.2 ರ ಪ್ರಕಾರ ಯಾವುದೇ ನೇಮಕಾತಿ ಅಧಿಸೂಚನೆಯಲ್ಲಿ ಮೂರಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳು ಲಭ್ಯವಾಗುತ್ತಿದ್ದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಗಳನ್ನು ಎಲ್ಲಾ 101 ಪರಿಶಿಷ್ಟ ಜಾತಿಗಳಿಗೆ ಸ್ಪರ್ಧಿಸಲು ಅವಕಾಶ ನೀಡುವುದು ಎಂದು ಸರ್ಕಾರ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಸದರಿ ನೇಮಕಾತಿ ಪ್ರಾಧಿಕಾರವು ಗ್ರೂಪ್-‘ಎ’ ನಲ್ಲಿ 3 ಹುದ್ದೆಗಳು ಪರಿಶಿಷ್ಟ ಜಾತಿಗೆ ಮೀಸಲಿದ್ದರೂ ಅವುಗಳಿಗೆ ಬೇರೆ ಬೇರೆ ಪ್ರವರ್ಗ ಗುಂಪುಗಳಾಗಿ ವಿಂಗಡಿಸಿದೆ. ಗ್ರೂಪ್-‘ಬಿ’ 3 ಹುದ್ದೆಗಳು ಮೀಸಲಿದ್ದು ಅವುಗಳಿಗೆ ಬೇರೆ ಬೇರೆಯಾಗಿ ಅಧಿಸೂಚನೆ ಹೊರಡಿಸಿದೆ. ಗ್ರೂಪ್-‘ಸಿ’ 1 ಹುದ್ದೆ ಇದ್ದು ಅದು ಕೇವಲ ಪರಿಶಿಷ್ಟ ಜಾತಿ ಪ್ರವರ್ಗ-‘ಎ’ ಗುಂಪಿಗೆ ಮೀಸಲಿಟ್ಟು ಸರ್ಕಾರದ ನಿಯಮವನ್ನು ನೇಮಕಾತಿ ಪ್ರಾಧಿಕಾರವು ಉಲ್ಲಂಘನೆ ಮಾಡಿದೆ.

ಸರ್ಕಾರವು ಇಂದಿನವರೆಗೆ ಮೀಸಲಾತಿ ರೋಸ್ಟರ್ ಬಿಂದುಗಳ ಹೊಸ ಆದೇಶವನ್ನು ಜಾರಿ ಮಾಡಿರುವುದಿಲ್ಲ. ಸದರಿ ಬ್ಯಾಂಕಿನ ನೇಮಕಾತಿ ಸಮಿತಿಯು ಯಾವ ರೋಸ್ಟರ್ ಬಿಂದುವಿನ ಮೇಲೆ ನೇಮಕಾತಿ ಮಾಡುತ್ತಿದೆ ಎಂಬುವುದನ್ನು ಸ್ಪಷ್ಟಿಕರಣ ಮಾಡಿರುವುದಿಲ್ಲ.

ಆದ್ದರಿಂದ ತಾವುಗಳು ಈ ಕೂಡಲೇ ಸದರಿ ನೇಮಕಾತಿ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಾಳು, ಆರ್.ಕೆ.ಡಿ.ಸಿ.ಸಿ. ಬ್ಯಾಂಕ್ ರಾಯಚೂರು ರವರಿಗೆ ನಿರ್ದೇಶನ ನೀಡಿ ಹೊಸ ಸರ್ಕಾರದ ಆದೇಶದ ಪ್ರಕಾರ ಹಾಗೂ ಹೊಸ ರೋಸ್ಟರ್ ಬಿಂದು ಬರುವವರೆಗೆ ನೇಮಕಾತಿ ಮಾಡದಂತೆ ಆದೇಶ ನೀಡಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ರವೀಂದ್ರನಾಥ್ ಶೆಟ್ಟಿ, ತಾಲೂಕು ಸಂಚಾಲಕರಾದ ನರಸಿಂಹಲು ನೆಲಹಾಳ, ತಾಲೂಕು ಸಂಚಾಲಕ ಪ್ರಸಾದ್ ಆದಾಪುರ ಸೇರಿದಂತೆ ಇತರರು ಇದ್ದರು.